ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಚುನಾವಣಾ ಪ್ರಚಾರದ ಕಾವು ಏರುತ್ತಿದ್ದರೂ, ವಿವಿಧ ಕಡೆ ಅಭ್ಯರ್ಥಿಗಳನ್ನು ಸೋಲಿಸಲು ಕೆಲವರು ವಾಮಾಚಾರ, ಮಾಟಮಂತ್ರದ ಮೊರೆ ಹೋಗಿದ್ದಾರೆ ಎಂಬ ದೂರಗಳು ದಾಖಲಾಗಿವೆ.
ಇತ್ತ ರಾಜ್ಯ ಸರ್ಕಾರ ವಾಮಾಚಾರ ಮತ್ತು ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ (2017) ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿರುವ ಬೆನ್ನಲೇ ಕೆಲವು ಪಕ್ಷಗಳ ಅಭ್ಯರ್ಥಿಗಳು ಎದುರಾಳಿಗಳನ್ನು ಸೋಲಿಸಲು ವಾಮಾಚಾರ, ಮಾಟ ಮಂತ್ರ ಮಾಡಿಸಿರುವ ಪ್ರಕರಣಗಳು ವರದಿಯಾಗಿದ್ದು ಪೊಲೀಸ್ ಠಾಣೆಗಳಲ್ಲಿ ದೂರ ದಾಖಲಾಗಿವೆ.
ಬೆಳ್ತಂಗಡಿಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೇರುಕಟ್ಟೆಯಲ್ಲಿ ಅಬ್ದುಲ್ ಕರೀಂ ಎಂಬುವರು ಬಿಜೆಪಿ ಕಾರ್ಯಕರ್ತ ಜಯಪ್ರಕಾಶ್ ಎಂಬುವರ ಮೇಲೆ ದೂರು ನೀಡಿದ್ದಾರೆ. ಜಯಪ್ರಕಾಶ್ ನಮ್ಮ ಮನೆಯ ಸಮೀಪ ‘ನಿಂಬೆಹಣ್ಣು’ ಮಂತ್ರಿಸಿ ವಾಮಾಚಾರ ಮಾಡಿದ್ದಾರೆ ಎಂದು ದೂರಿದ್ದಾರೆ. ಇದೇ ತೆರನಾದ ಮತ್ತೊಂದು ಪ್ರಕರಣ ವಿಜಯಪುರದಿಂದ ವರದಿಯಾಗಿದೆ. ಇಲ್ಲಿನ ಟಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಸಿದ್ದಪುರ ಗ್ರಾಮದ ಸ್ಮಶಾನದಲ್ಲಿ ಮಾಟ ಮಂತ್ರ ಮಾಡಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ಸಚಿವ ಎಂ.ಬಿ. ಪಾಟೀಲ್ ಅವರನ್ನು ಸೋಲಿಸುವ ಸಲುವಾಗಿ ಮಾಡಿರುವ ವಾಮಾಚಾರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಗುರುವಾರ ವಿಚಾರವಾದಿಗಳ ಸಂಘದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಮಂಗಳೂರಿನ ಅತ್ತಾವರ ಸ್ಮಶಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎರಡು ದಿನಗಳ ಹಿಂದೆ ಆಘೋರ ಕಾಳಿ ಸಂಹಾರ ಪೂಜೆ ನಡೆಸಿದ್ದು ಸ್ಥಳದಲ್ಲಿ ಗೊಂಬೆ, ನಿಂಬೆಹಣ್ಣು ಮತ್ತು ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ಗೊಂಬೆಯು ಅಂಗಾತ ಮಲಗಿತ್ತು, ಅದಕ್ಕೆ ಬಟ್ಟೆಯನ್ನು ಸುತ್ತಲಾಗಿತ್ತು. ಅದನ್ನು ಬಿಚ್ಚಿ ನೋಡಿದಾಗ ಆ ಗೊಂಬೆಯ ಮೇಲೆ ಜೆ.ಆರ್.ಲೋಬೊ ಎಂದು ಮಲಯಾಳಂನಲ್ಲಿ ಬರೆದಿದ್ದಾರೆ ಎಂದು ನರೇಂದ್ರ ನಾಯಕ್ ತಿಳಿಸಿದ್ದಾರೆ. ಲೋಬೊ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕೇತ್ರದ ಶಾಸಕರಾಗಿದ್ದಾರೆ. ಅವರಿಗೆ ಈ ಬಾರಿಯೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ.
ವಾಮಾಚರಿಗಳಿಗೆ ಸವಾಲ್: ಹತ್ತು ಲಕ್ಷ ಬಹುಮಾನ
ವಾಮಾಚಾರ, ಮಾಟ ಮಂತ್ರಗಳಿಂದ ಶಕ್ತಿ ಬರುವುದಾದರೆ, ನನ್ನ ಮುಂದೋಳಿನಲ್ಲಿರುವ ಕೆಲವು ಕೂದಲುಗಳನ್ನು ಗುರುತಿಸುವೆ ವಾಮಚಾರದ ಮೂಲಕ ಆ ಕೂದಲುಗಳನ್ನು ತೆಗೆದರೆ ಅಂತಹವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ ಕೊಡುವೆ ಎಂದು ಸವಾಲು ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.