ನಾಗಮಂಗಲ: ‘ನಿನ್ನ ರಾಜಕೀಯ ತಾಯಿ ಯಾರು. ನಿನ್ನನ್ನು ಮುಖ್ಯಮಂತ್ರಿ ಮಾಡಲು ಸೋನಿಯಾ ಗಾಂಧಿ ಮುಂದೆ ಆರು ದಿನಗಳ ಕಾಲ ಕೈಮುಗಿದು ನಿಂತಿದ್ದವರು ಯಾರು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ವಿಕಾಸವರ್ವ ಯಾತ್ರೆಯಲ್ಲಿ ಮಾತನಾಡಿದರು.
‘ಸತ್ಯ ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿಲ್ಲ. ಜೆಡಿಎಸ್ ನಿನ್ನ ರಾಜಕೀಯ ತಾಯಿ. ನಿನ್ನನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಕುಮಾರಸ್ವಾಮಿ. ಆದರೆ, ನೀನು ಮಿತ್ರ ದ್ರೋಹ ಮಾಡಿದೆ. ಇಲ್ಲಿಂದಲೇ ನಿನ್ನ ರಾಜಕೀಯ ಅಂತ್ಯವಾಗುತ್ತದೆ’ ಎಂದು ವಾಗ್ದಾಳಿ ನಡೆಸಿದರು.
‘ಜೆಡಿಎಸ್ ಹುಟ್ಟಿರುವುದು ರೈತರ, ದಲಿತರ, ಕಾರ್ಮಿಕರ ಉದ್ಧಾರಕ್ಕಾಗಿ. ಆದರೆ ರಾಹುಲ್ ಗಾಂಧಿ ಬಾಯಲ್ಲಿ ಜೆಡಿಎಸ್ ಎಂದರೆ ಜನತಾದಳ ಸಂಘಪರಿವಾರ ಎಂದು ಹೇಳಿಸುತ್ತಾರೆ. ಡಿ.ಕೆ.ಶಿವಕುಮಾರ್ ಬರೆದುಕೊಟ್ಟಿದ್ದನ್ನು ರಾಹುಲ್ಗಾಂಧಿ ಓದಿದ್ದಾರೆ. ಅಂತಹ ಕಠಿಣ ಮಾತನ್ನು ನಾನು ಸಹಿಸಿಕೊಳ್ಳುವುದಿಲ್ಲ. ಹಾಗೆ ಹೇಳಲು ರಾಹುಲ್ ಗಾಂಧಿ ಯಾರು? ನಾನು ನಿನ್ನೆ ಮೊನ್ನೆಯ ರಾಜಕಾರಣಿಯಲ್ಲ, ಜೆಡಿಎಸ್ ಅಪ್ಪ– ಮಕ್ಕಳ ಪಕ್ಷವೂ ಅಲ್ಲ’ ಎಂದು ಹೇಳಿದರು.
‘ಸಿದ್ದರಾಮಯ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ₹ 8 ಸಾವಿರ ಕೋಟಿ ಹಣವನ್ನು ಇನ್ನೂ ಸಹಕಾರಿ ಬ್ಯಾಂಕ್ಗಳಿಗೆ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಜೂನ್ ತಿಂಗಳಲ್ಲಿ ಕೊಡುವುದಾಗಿ ತಿಳಿಸಿದ್ದಾರೆ. ಅವರು ಮುಂದೆ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಹಣ ಕೊಡುವುದಿಲ್ಲ. ಎಲ್ಲಿಂದ ಸಾಲ ಮನ್ನಾ ಮಾಡಿದಂತಾಯಿತು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.