ADVERTISEMENT

ನಿಷೇಧಿತ ಸ್ಥಳದಲ್ಲಿ ಭಗವಾ ಧ್ವಜ: ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಚಿಕ್ಕಮಗಳೂರು: ದತ್ತ ಪೀಠದ 200 ಮೀಟರ್ ವ್ಯಾಪ್ತಿಯಲ್ಲಿ ಕೋರ್ಟ್ ಆದೇಶದಂತೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ತಂತಿ ಬೇಲಿ ಹಾಕಿರುವ ಜಾಗದಲ್ಲಿ ದತ್ತ ಮಾಲಾಧಾರಿಗಳು ಕಟ್ಟಿದ್ದ ಭಗವಾಧ್ವಜಗಳನ್ನು ಪೊಲೀಸರು ತೆರವುಗೊಳಿಸಲು ಮುಂದಾದಾಗ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಯಿತು.

ಹೋಮ ಹವನ ನಡೆಸಲು ನಿರ್ಮಿಸಿರುವ ತಾತ್ಕಾಲಿಕ ಶೆಡ್ ಸನಿಹದಲ್ಲಿ ತಂತಿ ಬೇಲಿ ಜಿಗಿದ ಕೆಲ ದತ್ತ ಮಾಲಾಧಾರಿಗಳು ಅತಿಕ್ರಮ ಪ್ರವೇಶ ಮಾಡಿ ನೀರಿನ ಟ್ಯಾಂಕ್ ಹಾಗೂ ಕಟ್ಟಡಗಳ ಮೇಲೆ ಏಳೆಂಟು ಭಗವಾಧ್ವಜಗಳನ್ನು ಕಟ್ಟಿದರು. ತಕ್ಷಣ ಸ್ಥಳಕ್ಕೆ ಓಡಿ ಬಂದ ಪೊಲೀಸರು ಭಗವಾಧ್ವಜ ತೆರವು ಮಾಡಲು ಯತ್ನಿಸಿದರು. ಆಗ ದತ್ತ ಮಾಲಾಧಾರಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಎಲ್ಲ ಭಗವಾಧ್ವಜಗಳನ್ನು ತೆರವುಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಸಿಬ್ಬಂದಿಗೆ ಸೂಚನೆ ನೀಡಿದಾಗ, ಮಾಲಾಧಾರಿಗಳು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸರು ಮತ್ತು ಭಕ್ತರ ನಡುವೆ ನೂಕಾಟ ನಡೆಯಿತು.

ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ಸಂಘ ಪರಿವಾರದ ಮುಖಂಡರಾದ ಸೂರ್ಯನಾರಾಯಣ ಇನ್ನಿತರರು ಆಕ್ರೋಶಗೊಂಡಿದ್ದ ಮಾಲಾಧಾರಿಗಳನ್ನು ಸಮಾಧಾನಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಸಂಜೆವರೆಗೂ ಎರಡು ಭಗವಾಧ್ವಜಗಳು ನಿಷೇಧಿತ ಜಾಗದಲ್ಲಿ ರಾರಾಜಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.