ಬೆಂಗಳೂರು: ‘ಸಿಇಟಿಯಲ್ಲಿ ಬಿಎಸ್ಸಿ(ಅಗ್ರಿ) 3ನೇ ರ್ಯಾಂಕ್ ಪಡೆದುಕೊಂಡಿದ್ದೆ ಆದರೆ ಚಿಕ್ಕವಯಸ್ಸಿನಿಂದ ನನಗೆ ವೈದ್ಯಳಾಗುವ ಕನಸು ಇದೆ’ ಎಂದು ನೀಟ್ ಪರೀಕ್ಷೆಯಲ್ಲಿ 209ನೇ ರ್ಯಾಂಕ್ ಪಡೆದುಕೊಂಡಿರುವ ಮಹಿಮಾ ಕೃಷ್ಣ ಹೇಳಿದರು.
‘ವಿವಿಎಸ್ ಸರ್ದಾರ್ ಪಟೇಲ್ ಕಾಲೇಜಿನಲ್ಲಿ ಪಿಯುಸಿ ಓದಿದೆ. ಅಲ್ಲಿನ ಶಿಕ್ಷಕರು ಹಾಗೂ ಬೇಸ್ ಇನ್ಸ್ಟಿಟ್ಯೂಟ್ ಸಹಾಯದಿಂದ ಉತ್ತಮ ಅಭ್ಯಾಸ ಮಾಡಿದೆ. 500ರೊಳಗಿನ ರ್ಯಾಂಕ್ ನಿರೀಕ್ಷೆ ಇತ್ತು’ ಎಂದು ಹೇಳಿದರು.
‘ಅಪ್ಪ ಸಾಫ್ಟ್ವೇರ್ ಎಂಜಿನಿಯರ್, ಅಮ್ಮ ಬಿಎಸ್ಎನ್ಎಲ್ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ನಾನು ಎಂಬಿಬಿಎಸ್ ಮಾಡಬೇಕು ಅನ್ನುವುದು ಅವರ ಕನಸು ಕೂಡ ಹೌದು. ಮುಂದೆ ಯಾವ ವಿಷಯದಲ್ಲಿ ಪರಿಣತಿ ಪಡೆದುಕೊಳ್ಳಬೇಕು ಎಂಬುದನ್ನು ಈಗಲೇ ನಿರ್ಧಾರ ಮಾಡಿಲ್ಲ. ಒಳ್ಳೆಯ ಕಾಲೇಜು ಸಿಕ್ಕಿದರೆ ಅಲ್ಲಿ ನನಗೆ ಇಷ್ಟವಾಗುವ ವಿಷಯವನ್ನು ಆಯ್ಕೆ ಮಾಡಿಕೊಂಡು ಮುಂದುವರಿಯುತ್ತೇನೆ’ ಎಂದರು.
ಅಪ್ಪ, ಅಮ್ಮನಂತೆ ನೇತ್ರ ತಜ್ಞನಾಗುವ ಆಸೆ
‘ಅಪ್ಪ, ಅಮ್ಮ ಇಬ್ಬರೂ ನೇತ್ರ ತಜ್ಞರು. ನನಗೂ ಇದೇ ಕ್ಷೇತ್ರದಲ್ಲಿ ಮುಂದುವರಿಯುವ ಆಸೆ. ಸಿಇಟಿಯಲ್ಲಿ ಪಶುವೈದ್ಯಕೀಯ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದುಕೊಂಡಿದ್ದೆ. ವೈದ್ಯನಾಗುವ ಕನಸಿನಿಂದ ನೀಟ್ ಪರೀಕ್ಷೆಯನ್ನೂ ಬರೆದೆ. 1000ದೊಳಗೆ ರ್ಯಾಂಕ್ ಸಿಗುವ ನಿರೀಕ್ಷೆ ಇತ್ತು. ಆದರೆ 342ನೇ ರ್ಯಾಂಕ್ ಸಿಕ್ಕಿದ್ದು ಖುಷಿಯಾಯಿತು’ ಎಂದು ಬೀದರ್ನ ವಿನೀತ್ ಹೇಳಿದ್ದಾರೆ.
‘ಶಾಹೀನ್ ಪಿ.ಯು ಕಾಲೇಜಿನಲ್ಲಿ ಪಿಯುಸಿ ಓದಿದೆ. ಶಾಲೆ ಹಾಗೂ ಮನೆಯಲ್ಲಿ ನನಗೆ ಉತ್ತಮ ಬೆಂಬಲವಿದೆ. ಇದರಿಂದ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.