ADVERTISEMENT

ನುಡಿಸಿರಿಯಲ್ಲಿ ಭಾರಿ ಜನಸ್ತೋಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 19:30 IST
Last Updated 2 ಡಿಸೆಂಬರ್ 2017, 19:30 IST
ನುಡಿಸಿರಿಯಲ್ಲಿ ಭಾರಿ ಜನಸ್ತೋಮ
ನುಡಿಸಿರಿಯಲ್ಲಿ ಭಾರಿ ಜನಸ್ತೋಮ   

ವಿದ್ಯಾಗಿರಿ (ಮೂಡುಬಿದಿರೆ): ಕನ್ನಡ ನಾಡು ನುಡಿಯ ರಾಷ್ಟ್ರೀಯ ಹಬ್ಬ ಆಳ್ವಾಸ್ ನುಡಿಸಿರಿಗೆ ಶನಿವಾರ ನಿರೀಕ್ಷೆಯಂತೆ ಭಾರಿ ಜನಸಾಗರ ಹರಿದು ಬಂದಿರುವುದರಿಂದ ಶನಿವಾರ ಸಂಜೆಯಾಗುತ್ತಲೆ ವಿದ್ಯಾಗಿರಿ ಆವರಣ ಕನ್ನಡ ಪ್ರೇಮಿಗಳು, ಸಾಹಿತ್ಯಾಸಕ್ತರಿಂದ ತುಂಬಿ ತುಳುಕಿತು.

ನಾಡಿನ ಬೇರೆ ಬೇರೆ ಕಡೆಗಳಿಂದ ನುಡಿಸಿರಿ ಸಮ್ಮೇಳನವನ್ನು ಆಸ್ವಾದಿಸಲು ಬಂದ ಜನರಿಂದಾಗಿ ಸಂಜೆ ವಿದ್ಯಾಗಿರಿಯ ಮುಖ್ಯ ರಸ್ತೆಯಲ್ಲಿ ಸ್ವಲ್ಪ ಹೊತ್ತು ವಾಹನ ಸಂಚಾರ ದಟ್ಟಣೆ ಉಂಟಾಯಿತು. 12 ವೇದಿಕೆಗಳಲ್ಲಿ ಏಕಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಜನ ಅಲ್ಲಲ್ಲಿ ಹಂಚಿಹೋಗಿದ್ದರಿಂದ ನುಡಿಸಿರಿ ಆವರಣದಲ್ಲಿ ಎಲ್ಲಿಯೂ ಅಷ್ಟೊಂದು ಜನರ ಒತ್ತಡ ಕಂಡುಬಂದಿಲ್ಲ. ಹೀಗಾಗಿ ಎಲ್ಲರಿಗೂ ಅತ್ತಿಂದಿತ್ತ ಸಲೀಸಾಗಿ ತಿರುಗಾಡಲು ಹಾಗೂ ಕಾರ್ಯಕ್ರಮವನ್ನು ಕಣ್ತುಂಬ ಆನಂದಿಸಲು ಸಾಧ್ಯವಾಯಿತು.

ಈ ಬಾರಿಯ ಸಮ್ಮೇಳನದಲ್ಲಿ ಕೃಷಿಸಿರಿಗೆ ಹೆಚ್ಚು ಒತ್ತು ನೀಡಿದರಿಂದ ಹೆಚ್ಚಿನ ಸಂಖ್ಯೆಯ ರೈತರು, ರೈತ ಹಿನ್ನೆಲೆಯ ಜನರು ಸಮ್ಮೇಳನದಲ್ಲಿ ಕಂಡುಬಂದರು. ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿಶೇಷ ಅವಕಾಶವನ್ನು ಕಲ್ಪಿಸಿದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ನುಡಿಸಿರಿಗೆ ಬಂದು ಇಲ್ಲಿನ ಸಾಹಿತ್ಯದ ರುಚಿ, ಸಾಂಸ್ಕೃತಿಕ ಸೊಬಗನ್ನು ಅನುಭವಿಸಿದರು.

ADVERTISEMENT

ನುಡಿಸಿರಿಗೆ ಕಳೆದ ವರ್ಷಕ್ಕಿಂತಲು ಈ ಬಾರಿ ಹೆಚ್ಚಿನ ಪ್ರಚಾರ ನೀಡಲಾಗಿದ್ದು, ನಾಡಿನ ಎಲ್ಲಾ ವರ್ಗದ ಜನರು ಸಮ್ಮೇಳನಕ್ಕೆ ಬರಬೇಕೆಂಬ ಸಮ್ಮೇಳನದ ರೂವಾರಿ ಡಾ.ಎಂ. ಮೋಹನ ಆಳ್ವರ ಉದ್ದೇಶ ಈಡೇರಿದ್ದು ಕಂಡುಬಂತು. ಶನಿವಾರ ಸುಮಾರು ಒಂದು ಲಕ್ಷ ಜನ ನುಡಿಸಿರಿಗೆ ಬಂದಿದ್ದಾರೆ ಎಂದು  ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.