ADVERTISEMENT

ನೂರಾರು ಮನೆ ಜಲಾವೃತ: ಒಂದು ಸಾವು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಜ್ಯದ ಹಿರಿಯೂರು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತಿತರ ಕಡೆ ಬುಧವಾರ ರಾತ್ರಿ ಹಾಗೂ ಗುರುವಾರ ಭಾರಿ ಮಳೆಯಾಗಿದ್ದು ನೂರಾರು ಮನೆಗಳು ಜಲಾವೃತ­ಗೊಂಡಿ­ದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಪಾವಗಡ ತಾಲ್ಲೂಕಿನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಹಿರಿಯೂರು ವರದಿ: ನಗರದಲ್ಲಿ ಸುರಿದ ಮಳೆಗೆ ಚಿಟುಮಲ್ಲೇಶ್ವರ ಬಡಾವಣೆಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಿರಿಯೂರಿನ ನಗರದ ನಂಜಯ್ಯನ ಕೊಟ್ಟಿಗೆ ಪಕ್ಕದಲ್ಲಿರುವ ಆಶ್ರಯ ಕಾಲೊ­ನಿ­­ಯಲ್ಲಿ ಇನ್ನೂರಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ಮನೆಗಳಿಗೆ ನೀರು ನುಗ್ಗಿದೆ.

ಪೌದಿಯಮ್ಮ ದೇವಸ್ಥಾನ ಕೆಳಭಾಗದಲ್ಲಿ ಹರಿದು ಹೋಗುವ ದೊಡ್ಡ ಮೋರಿಯಲ್ಲಿ ಮೇರೆ ಮೀರಿ ಬಂದ ಮಳೆಯ ನೀರು ವಾಗ್ದೇವಿ ವಿದ್ಯಾಸಂಸ್ಥೆಯ ಆವರಣಕ್ಕೆ ನುಗ್ಗಿದ್ದರಿಂದ ಇಡೀ ಶಾಲೆ ಚಿಕ್ಕ ದ್ವೀಪದಂತೆ ಕಾಣುತ್ತಿತ್ತು. ತರಕಾರಿ ಮಾರುಕಟ್ಟೆ ರಸ್ತೆ ಹಾಗೂ ಲಕ್ಕವ್ವನಹಳ್ಳಿ ರಸ್ತೆಗಳಲ್ಲಿ ಐದಾರು ಅಡಿ ಆಳದವರೆಗೆ ನೀರು ಹರಿದು ಎರಡೂ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

3 ವರ್ಷದ ನಂತರ ಸುವರ್ಣಮುಖಿ ನದಿಯಲ್ಲಿ ನೀರು ಹರಿದಿದೆ. ಗಾಯತ್ರಿ ಜಲಾಶಯಕ್ಕೆ ಒಂದೇ ರಾತ್ರಿಗೆ ನಾಲ್ಕು ಅಡಿ ನೀರು ಬಂದಿದೆ ಎಂದು ತಾ.ಪಂ ಮಾಜಿ ಅಧ್ಯಕ್ಷ ಕೆ. ಮಂಜುನಾಥ್ ತಿಳಿಸಿದರು. ಪಾವಗಡ ವರದಿ: ಪಾವಗಡ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, 169 ಮನೆಗಳು ಕುಸಿದುಬಿದ್ದಿವೆ. ಹಳ್ಳದ ನೀರಿನಲ್ಲಿ ಯುವಕನ್ನೊಬ್ಬ ಕೊಚ್ಚಿ ಹೋಗಿದ್ದಾನೆ. ಜಲಧಿ ಹಳ್ಳದಲ್ಲಿ ಕೊಚ್ಚಿಹೋದ ಯುವಕನನ್ನು  ವೆಂಕಟಾಪುರದ ರಾಮಾಂಜಿ (21)ಎಂದು ಗುರುತಿಸಲಾಗಿದೆ.

ರಂಗನಾಥಪುರ, ಆರನಕಟ್ಟೆ, ಸಮುದ್ರ ದಹಳ್ಳಿ ಭಾಗದಲ್ಲಿ ಹಿಂದೆಂದೂ ಕಾಣದಂತಹ ಮಳೆಯಾಗಿದೆ. ದಸರಾ ಸಿದ್ಧತೆಗೆ ಅಡಿ್ಡ: ಮೂರು ದಿನಗಳಿಂದ ಮೈಸೂರು ನಗರದಲ್ಲಿ ಧಾರಾಕಾರ ಮಳೆಯಾ­ಗುತ್ತಿದೆ. ಇದರಿಂದ ದಸರಾ ಕಾಮಗಾರಿ­ಗಳಿಗೆ ಅಡಚಣೆ ಎದುರಾಗಿದೆ.

ಚಾಮರಾಜನಗರ ವರದಿ: ನಗರದಲ್ಲಿ ಗುರುವಾರ ಸುಮಾರು ಒಂದೂವರೆ ಗಂಟೆಗಳ ಕಾಲ ಮಳೆ ಸುರಿಯಿತು. ನಗರದ ಪ್ರಮುಖ ಬೀದಿಗಳು  ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಭುವನೇಶ್ವರಿ ವೃತ್ತ, ಜೋಡಿ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ-­ವಾಗಿತ್ತು. ಮಂಡ್ಯ ಜಿಲ್ಲೆಯಲ್ಲಿನ ಮಳೆ: ಮಂಡ್ಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಉತ್ತಮ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT