ADVERTISEMENT

ಪಂಪ್‌ಸೆಟ್ ಸಕ್ರಮ ಸಂಪುಟ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:40 IST
Last Updated 3 ಫೆಬ್ರುವರಿ 2011, 18:40 IST


ಬೆಂಗಳೂರು:  ರಾಜ್ಯದಲ್ಲಿನ ಅನಧಿಕೃತ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಗುರುವಾರ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದಕ್ಕೆ ರೈತರು 10ರಿಂದ 15 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ.

2003-04ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 1.35 ಲಕ್ಷ ಅನಧಿಕೃತ ಪಂಪ್‌ಸೆಟ್‌ಗಳಿದ್ದವು. ಈಗ ಅವುಗಳ ಸಂಖ್ಯೆ 1.5 ಲಕ್ಷ ಆಗಿರಬಹುದು. ಈ ಎಲ್ಲವನ್ನೂ ಒಮ್ಮೆಗೆ ಸಕ್ರಮಗೊಳಿಸುವುದರ ಮೂಲಕ ಇಡೀ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಸಂಪುಟ ಸಭೆಯ ತೀರ್ಮಾನಗಳನ್ನು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಯೊಂದು ಅನಧಿಕೃತ ಸಂಪರ್ಕದ ಸಕ್ರಮ ಶುಲ್ಕ 70 ಸಾವಿರ ರೂಪಾಯಿ. ಇದರಲ್ಲಿ ಸಂಬಂಧಪಟ್ಟ ರೈತ 10 ಸಾವಿರ ರೂಪಾಯಿ ಮತ್ತು ಎರಡು ತಿಂಗಳ ಠೇವಣಿ ಮೊತ್ತವನ್ನು ಪಾವತಿಸಬೇಕು. ಉಳಿದಂತೆ 25 ಸಾವಿರ ರೂಪಾಯಿ ರಾಜ್ಯ ಸರ್ಕಾರ ಪಾವತಿಸಿದರೆ, ಸಂಬಂಧಪಟ್ಟ ವಿದ್ಯುತ್ ವಿತರಣಾ ಕಂಪೆನಿ ತಲಾ ರೂ 35,000 ಪಾವತಿಸಲಿದೆ ಎಂದು ವಿವರಿಸಿದರು.

2010ರ ಡಿಸೆಂಬರ್ 31ರವರೆಗಿನ ಎಲ್ಲ ಅನಧಿಕೃತ ಪಂಪ್‌ಸೆಟ್‌ಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಆ ನಂತರ ಅನಧಿಕೃತ ಸಂಪರ್ಕ ಪಡೆದ ರೈತರಿಗೆ ದಂಡ ಶುಲ್ಕದೊಂದಿಗೆ ಸಕ್ರಮ ಮಾಡಲಾಗುತ್ತದೆ ಎಂದು ಹೇಳಿದರು.

ಒಟ್ಟಾರೆ ಈ ಸಕ್ರಮ ಯೋಜನೆಗೆ 375 ಕೋಟಿ ರೂಪಾಯಿ ಬೇಕಾಗುತ್ತದೆ. ಅನಧಿಕೃತ ಪಂಪ್‌ಸೆಟ್‌ಗಳ ವಿದ್ಯುತ್ ಬಳಕೆ ಬಗ್ಗೆ ನಿಖರವಾದ ಮಾಹಿತಿಯೇ ಇಲ್ಲ. ಹೀಗಾಗಿ ಎಲ್ಲವನ್ನೂ ಸಕ್ರಮಗೊಳಿಸಿ, ಇಂತಿಷ್ಟು ಪಂಪ್‌ಸೆಟ್‌ಗಳಿಗೆ ಒಂದೊಂದು ಟ್ರಾನ್ಸ್‌ಫಾರ್ಮರ್ ಅಳವಡಿಸುವುದು. ಪಂಪ್‌ಸೆಟ್‌ಗಳ ಬದಲಾಗಿ ಟ್ರಾನ್ಸ್‌ಫಾರ್ಮರ್‌ಗಳಿಗೇ ಮೀಟರ್ ಅಳವಡಿಸಿ, ಆ ವ್ಯಾಪ್ತಿಯಲ್ಲಿ ಎಷ್ಟು ವಿದ್ಯುತ್ ಬಳಸಲಾಗುತ್ತಿದೆ ಎನ್ನುವುದರ ಮಾಹಿತಿ ಪಡೆಯುವುದು ಈ ಸುಧಾರಣೆ ಹಿಂದಿನ ಉದ್ದೇಶ ಎಂದು ಅವರು ವಿವರಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.