ಗುಲ್ಬರ್ಗ: ಗಂಗೋತ್ರಿ ದರ್ಶನಕ್ಕೆಂದು ತೆರಳಿದ್ದ ಗುಲ್ಬರ್ಗದ ದಂಪತಿ, ಉತ್ತರಾಖಂಡದ ಮಸೂರಿ -ಉತ್ತರ ಕಾಶಿ ಮಧ್ಯ ಜೂ.16 ರಂದು ರಸ್ತೆ ಸಂಚಾರ ಸ್ಥಗಿತಗೊಂಡು ಅಪಾಯಕ್ಕೆ ಸಿಲುಕಿದ್ದರು. ಐದು ದಿನಗಳ ನಂತರ ದುರ್ಗಮ ರಸ್ತೆಯಿಂದ ಮುಂದೆ ಸಾಗಿ ಶುಕ್ರವಾರ ದೆಹಲಿಗೆ ಹೊರಟಿದ್ದಾರೆ.
ಗುಲ್ಬರ್ಗ ನಿವಾಸಿಗಳಾದ ರಾಮಾನುಜ -ಲೀಲಾ ಮುಂದಡಾ ದಂಪತಿ ಹಾಗೂ ರವಿ-ತನಿಜಾ ಕುಲಕರ್ಣಿ ದಂಪತಿ `ಮೇಕ್ ಮೈ ಟ್ರಿಪ್' ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಜೂ. 13ರಂದು ಗುಲ್ಬರ್ಗದಿಂದ ಯಾತ್ರೆಗೆ ತೆರಳಿದ್ದರು.
ಇದೀಗ ಎಲ್ಲರೂ ಸುರಕ್ಷಿತವಾಗಿದ್ದು, ಶುಕ್ರವಾರ ಬೆಳಿಗ್ಗೆ ಹರಿದ್ವಾರದಿಂದ ದೆಹಲಿಯತ್ತ ಬಾಡಿಗೆ ಕಾರಿನಲ್ಲಿ ಸಂಚರಿಸುತ್ತಿರುವುದಾಗಿ ರಾಮಾನುಜ ಮುಂದಡಾ ಅವರು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ'ಯೊಂದಿಗೆ ಕಹಿ ಅನುಭವ ಹಂಚಿಕೊಂಡರು.
`ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಮಸೂರಿ ಹಾಗೂ ಉತ್ತರ ಕಾಶಿ ಮಧ್ಯೆ ಮೂರು ದಿನ ಟೆಂಟ್ಹೌಸ್ನಲ್ಲಿ ಹಾಗೂ ಎರಡು ದಿನ ವಾಹನದಲ್ಲಿ ಅಲ್ಪಸ್ವಲ್ಪ ಆಹಾರ ತಿಂದು ಬದುಕಿದ್ದೆವು. ಐದು ದಿನಗಳ ನಂತರವಾದರೂ ಅಲ್ಲಿಂದ ಹೊರಬಂದಿದ್ದೇವೆ, ಇದು ನಮ್ಮ ಪುಣ್ಯ' ಎಂದರು.
`ಮಸೂರಿಯಿಂದ ಕಾರಿನಲ್ಲಿ 200 ಕಿ.ಮೀ ದೂರವನ್ನು 15 ಗಂಟೆ ಸಂಚರಿಸಿದ್ದೇವೆ. 21 ಕಡೆಗಳಲ್ಲಿ ರಸ್ತೆ ಕುಸಿದಿತ್ತು. ತಾತ್ಕಾಲಿಕ ಗುಡ್ಡ ಕಡಿದು ನಿರ್ಮಿಸಿದ್ದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಪಾರಾಗಿ ಬಂದಿದ್ದೇವೆ' ಎಂದು ಭಯಾನಕ ಅನುಭವವನ್ನು ವಿವರಿಸಿದರು.
ರಾಜ್ಯ ಸರ್ಕಾರಕ್ಕೆ ಧನ್ಯವಾದ: `ಉತ್ತರಾಖಂಡ ಸರ್ಕಾರ ನಿರ್ಲಕ್ಷ್ಯ ತಾಳಿದ್ದು, ಯಾತ್ರಾರ್ಥಿಗಳಿಗೆ ಯಾವುದೇ ವ್ಯವಸ್ಥೆ ಮಾಡುತ್ತಿಲ್ಲ. ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿದೆವು. ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಿದರು. ರಸ್ತೆ ಸಂಚಾರ ಆರಂಭಗೊಂಡಿರುವ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಿದರು. ಕರ್ನಾಟಕ ಸರ್ಕಾರ ತನ್ನ ಯಾತ್ರಾರ್ಥಿಗಳನ್ನು ತುಂಬಾ ಚೆನ್ನಾಗಿ ವಿಚಾರಿಸಿತು' ಎಂದು ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದರು.
`ಶುಕ್ರವಾರ ರಾತ್ರಿ ದೆಹಲಿ ತಲುಪುತ್ತೇವೆ. ಯಾತ್ರಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರ ವಿಶೇಷ ಕೌಂಟರ್ ತೆರೆದಿದೆ ಎನ್ನುವ ಮಾಹಿತಿ ಇದೆ. ಅಲ್ಲಿಗೆ ಹೋದ ನಂತರ ರೈಲಿನ ಮೂಲಕ ಗುಲ್ಬರ್ಗಕ್ಕೆ ಮರಳುತ್ತೇವೆ.
ಜೀವನದಲ್ಲಿ ದೊಡ್ಡ ಅನುಭವವಾಗಿದೆ. ಜೂ. 26ರ ವರೆಗೂ ಪ್ರವಾಸದ ಪೂರ್ವ ಯೋಜನೆ ಮಾಡಿಕೊಂಡಿದ್ದೆವು. ಯಮುನೇತ್ರಿ ದರ್ಶನ ಮಾಡಿಕೊಂಡು, ಗಂಗೋತ್ರಿಗೆ ಹೊರಟಿದ್ದೆವು. ಅಲ್ಲಿಂದ ಜೈಪುರ, ಆಗ್ರಾ ಭೇಟಿಗೆ ಯೋಜನೆ ಮಾಡಿಕೊಂಡಿದ್ದೆವು. ಈಗ ಗುಲ್ಬರ್ಗ ತಲುಪಿದರೆ ಸಾಕು ಎನಿಸುತ್ತಿದೆ' ಎಂದು ಗದ್ಗದಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.