ADVERTISEMENT

ಪಿಲಿಕುಳ: ಬಾಲ ಭಾರತ್ ಸೃಜನೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಮಂಗಳೂರು: ರಾಜ್ಯ ಬಾಲಭವನ ಸೊಸೈಟಿ ಹಾಗೂ ದ.ಕ. ಜಿಲ್ಲಾಡಳಿತ ಆಶ್ರಯದಲ್ಲಿ ಬಾಲ್ ಭಾರತ್ ಸೃಜನೋತ್ಸವಕ್ಕೆ ನಗರದ ಪಿಲಿಕುಳದಲ್ಲಿ ಭಾನುವಾರ ಸಂಜೆ ಚಾಲನೆ ನೀಡಲಾಯಿತು.

ನಾಲ್ಕು ದಿನಗಳ ಸೃಜನೋತ್ಸವದಲ್ಲಿ ಹೊರರಾಜ್ಯಗಳಿಂದ 350 ಮಕ್ಕಳು ಸೇರಿದಂತೆ 1400ಕ್ಕೂ ಅಧಿಕ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ.

ಸಮಾರಂಭ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಿ.ಸಿ. ಪಾಟೀಲ್‌ಮಾತನಾಡಿ, ನೂರಾರು ಭಾಷೆ ಹಾಗೂ ಬೇರೆ ಬೇರೆ ಧರ್ಮದ ಜನರು ಇಲ್ಲಿ ಕಲೆತಿದ್ದಾರೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಇದೊಂದು ವೇದಿಕೆ. ಬೇರೆ ಕಡೆಯ ಮಕ್ಕಳು ಇಲ್ಲಿಯ ಸಂಸ್ಕೃತಿ ಹಾಗೂ ಅಲ್ಲಿನ ಮಕ್ಕಳು ಇಲ್ಲಿನ ಸಂಸ್ಕೃತಿ ಕಲಿಯಬೇಕು.

ಮಕ್ಕಳು ಅಂಕ ಗಳಿಸುವ ಕಡೆಗೆ ಮಾತ್ರ ಗಮನ ಹರಿಸಬಾರದು. ಪಠ್ಯೇತರ ಚಟುವಟಿಕೆ ಹಾಗೂ ರಚನಾತ್ಮಕ ಚಟುವಟಿಕೆಯಲ್ಲೂ ತೊಡಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಮಾತನಾಡಿ, ಮಕ್ಕಳು ದೇಶದ ಸಂಪತ್ತು. ಅವರನ್ನು ಉತ್ತಮ ದಾರಿಯಲ್ಲಿ ಕೊಂಡು ಹೋಗಬೇಕು. ಮಕ್ಕಳು ದೇಸಿ ಸಂಸ್ಕೃತಿ ಬಿಡಬಾರದು. ನಮ್ಮ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳು ದಾರಿ ತಪ್ಪಿದರೆ ದೇಶವೇ ದಾರಿ ತಪ್ಪಿದಂತೆ ಎಂದರು.

ಚಿತ್ರನಟಿ ರೂಪಿಕಾ ಮಾತನಾಡಿ, ಮಗುವಿನ ಸಾಧನೆಗೆ ಗುರು ಇರಬೇಕು. ದಾರಿ ತೋರಬೇಕು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.