ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಕಟ್ಟಲು ಇದ್ದ ಕೊನೆಯ ದಿನವನ್ನು ಇದೇ 18ರವರೆಗೆ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಹಿಂದೆ ವಿದ್ಯಾರ್ಥಿಗಳು ದಂಡ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಪಾವತಿಸಲು ಇದೇ 15, ಕಾಲೇಜಿನವರು ಒಂದೇ ಕಂತಿನಲ್ಲಿ ಅದನ್ನು ಖಜಾನೆಗೆ ಸಂದಾಯ ಮಾಡಲು 16ರಂದು ಹಾಗೂ ಪರೀಕ್ಷಾ ಅರ್ಜಿಗಳನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ತಲುಪಿಸಲು 17 ಕಡೆಯ ದಿನವಾಗಿತ್ತು. ಈ ದಿನಗಳನ್ನು ಕ್ರಮವಾಗಿ ಇದೇ 18, 19, 21ಕ್ಕೆ ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಇದೇ ಕಡೆಯ ಅವಕಾಶವಾಗಿರುತ್ತದೆ. ಇದಾದ ನಂತರ ಕಾಲೇಜಿನ ಪ್ರಾಂಶುಪಾಲರು ಪುನರಾವರ್ತಿತ ಅಭ್ಯರ್ಥಿಗಳ ಅರ್ಜಿಗಳನ್ನು ಸ್ವೀಕರಿಸಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕಾಲೇಜಿನವರು ನೀಡಿದ ಎಲ್ಲಾ ಪುನರಾವರ್ತಿತ ಅಭ್ಯರ್ಥಿಗಳ ಅರ್ಜಿಗಳನ್ನು ಜಿಲ್ಲಾ ಉಪನಿರ್ದೇಶಕರು ಒಂದೇ ಕಂತಿನಲ್ಲಿ 22ರಂದು ಖುದ್ದಾಗಿ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಮರುಮೌಲ್ಯಮಾಪನ ವಿಸ್ತರಣೆ: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಇಲಾಖೆ ಮತ್ತೆ ವಿಸ್ತರಿಸಿದ್ದು, ಇದೇ 19ರವರೆಗೆ ಮುಂದೂಡಲಾಗಿದೆ.
ಈಗಾಗಲೇ ಎರಡು ಬಾರಿ ಅವಧಿ ವಿಸ್ತರಿಸಲಾಗಿದೆ. ಈ ಮೊದಲು ಹೊರಡಿಸಿದ ಸುತ್ತೋಲೆ ಪ್ರಕಾರ ಮೇ 17 ಕೊನೆಯ ದಿನಾಂಕವಾಗಿತ್ತು. ಮರು ಮೌಲ್ಯಮಾಪನ ಬಯಸುವ ವಿದ್ಯಾರ್ಥಿಗಳು ನಕಲು ಪ್ರತಿಯನ್ನು ಮೇ 18ರ ಒಳಗೆ ಡೌನ್ಲೋಡ್ ಮಾಡಿಕೊಳ್ಳಬಹುದು. ಈಗಾಗಲೇ ಉತ್ತರ ಪತ್ರಿಕೆಗಳ ನಕಲು ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು ಮಾತ್ರ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.