ADVERTISEMENT

ಪೊಲೀಸರಿಂದ ರೌಡಿ ಶೀಟರ್‌ಗಳ ಮೇಲೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST

ಕಲಬುರ್ಗಿ: ಇಲ್ಲಿನ ಆಳಂದ ರಸ್ತೆಯ ಡಬರಾಬಾದ್ ಆಶ್ರಯ ಕಾಲೊನಿ ಬಳಿ ಭಾನುವಾರ ರೌಡಿ ಶೀಟರ್‌ಗಳಿಬ್ಬರು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಅವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ವಿದ್ಯಾನಗರ ನಿವಾಸಿಗಳಾದ ಶಿವಕುಮಾರ್ ಹಾಗೂ ಚೇತನ್ ಹಲ್ಲೆ ಮಾಡಿದವರು.

‘ಇವರು ಅ. 2ರಂದು ರಾತ್ರಿ ಇಲ್ಲಿನ ಹೀರಾಪುರ ಕ್ರಾಸ್ ಬಳಿ ಬೈಕ್‌ ಮೇಲೆ ತೆರಳುತ್ತಿದ್ದ ಪ್ರವೀಣ ಹಾಗೂ ವಿನಾಯಕ ಅವರಿಗೆ ಚಾಕುವಿನಿಂದ ಇರಿದು ನಗ–ನಾಣ್ಯ ದೋಚಿದ್ದರು. ಭಾನುವಾರ ದರೋಡೆಗೆ ಹೊಂಚು ಹಾಕಿದ್ದ ಖಚಿತ ಮಾಹಿತಿ ಆಧರಿಸಿ ಇವರನ್ನು ಬಂಧಿಸಲು ತೆರಳಿದ್ದ ರಾಘವೇಂದ್ರ ನಗರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅಕ್ಕಮಹಾದೇವಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಪ್ರಹ್ಲಾದ ಕುಲಕರ್ಣಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು. ತಕ್ಷಣ ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇಬ್ಬರೂ ರೌಡಿ ಶೀಟರ್‌ಗಳಿಗೆ ಮೊಣಕಾಲಿಗೆ ಗುಂಡು ತಗುಲಿವೆ. ಅಕ್ಕಮಹಾದೇವಿ ಮತ್ತು  ಪ್ರಹ್ಲಾದ ಅವರಿಗೆ ಕೈಗೆ ಗಾಯವಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಅವರು ಹೇಳಿದರು.

‘ರೌಡಿ ಶೀಟರ್‌ಗಳನ್ನು ಬಂಧಿಸಿರುವ ಪೊಲೀಸರ ತಂಡಕ್ಕೆ ₹1 ಲಕ್ಷ ನಗದು ಬಹುಮಾನ ನೀಡಲಾಗುವುದು. ಅಕ್ಕಮಹಾದೇವಿ ಅವರಿಗೆ ಮುಖ್ಯಮಂತ್ರಿ ಪದಕ ನೀಡುವಂತೆ ಶಿಫಾರಸು ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.