ಮಡಿಕೇರಿ: ನಗರದಲ್ಲಿ ಜನವರಿ 7ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಇಚ್ಛಿಸುವವರಿಗೆ ನೋಂದಣಿ ಮಾಡಿಕೊಳ್ಳಲು ಡಿ. 15ರ ಗಡುವನ್ನು ಕಸಾಪ ನಿಗದಿಪಡಿಸಿದೆ.
ರಾಜ್ಯದ ಸಾಹಿತ್ಯಾಸಕ್ತರು ಆಯಾ ಜಿಲ್ಲೆಗಳ ಕಸಾಪ ಕಚೇರಿಗಳಲ್ಲಿ ಪ್ರತಿನಿಧಿ ಶುಲ್ಕ ರೂ.300 ಭರಿಸಿ ತಮ್ಮ ಹೆಸರನ್ನು ನೋಂದಾಯಿಸಬಹುದು. ನೋಂದಾಯಿಸಿಕೊಂಡ ಪ್ರತಿನಿಧಿಗಳಿಗೆ ಸಮ್ಮೇಳನ ನಡೆಯುವ ಮೂರು ದಿನಗಳವರೆಗೆ ಉಚಿತ ವಸತಿ, ಊಟೋಪಚಾರಕ್ಕೆ ಪ್ರತ್ಯೇಕ ಕೂಪನ್ ವ್ಯವಸ್ಥೆ, ಲೇಖನ ಸಾಮಗ್ರಿಗಳು, ಬ್ಯಾಗ್, ಬ್ಯಾಡ್ಜ್ ನೀಡಲು ಕಸಾಪ ನಿರ್ಧರಿಸಿದೆ.
ಬೆಟ್ಟ ಗುಡ್ಡಗಾಡು ಪ್ರದೇಶಗಳಿಂದ ಆವೃತವಾಗಿರುವ ಮಡಿಕೇರಿ ನಗರವು ಅತ್ಯಂತ ಪುಟ್ಟ ಪ್ರದೇಶ. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದರೆ, ಅವರಿಗೆಲ್ಲ ವಸತಿ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ. ಇದನ್ನು ಮನಗಂಡಿರುವ ಕಸಾಪ ಪ್ರತಿನಿಧಿಗಳ ನೋಂದಣಿಯನ್ನು ಡಿ. 15ರ ನಂತರ ನಿಲ್ಲಿಸಲಿದೆ.
ಗಡಿ ರಾಜ್ಯಗಳ ಕಸಾಪ ಘಟಕಗಳಿಗೂ ನೋಂದಣಿ ಪುಸ್ತಕ ಕಳುಹಿಸಿಕೊಡಲಾಗಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಆದ್ಯತೆ ಮೇರೆಗೆ ಅವರಿಗೆ ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕಸಾಪ ಪದಾಧಿಕಾರಿಗಳು ತಿಳಿಸಿದರು.
ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸುಮಾರು 1 ಲಕ್ಷ ಜನ ಸೇರುವ ಅಂದಾಜು ಇದೆ. ಊಟ, ತಿಂಡಿ, ಕಾಫಿ, ಚಹಾ – ಎಲ್ಲವನ್ನೂ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಗೂ ಉಚಿತವಾಗಿ ಒದಗಿಸಲಾಗುವುದು.
ವಸತಿ ವ್ಯವಸ್ಥೆಯನ್ನು ನೋಂದಣಿ ಮಾಡಿಕೊಂಡ ಪ್ರತಿನಿಧಿಗಳಿಗೆ ಮಾತ್ರ ಕಲ್ಪಿಸಲಾಗುತ್ತದೆ. ಸಾರ್ವಜನಿಕರು ತಮ್ಮ ವಸತಿಯನ್ನು ತಾವೇ ಸ್ವತಃ ಮಾಡಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.