ADVERTISEMENT

ಬಡವರಿಗೆ ಜಾಲಪ್ಪ ಆಸ್ಪತ್ರೆ ಆರೋಗ್ಯ ರಕ್ಷಾ ಕಾರ್ಡ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಕೋಲಾರ: ಬೆಳ್ಳಿ ವರ್ಷಾಚರಣೆ ಪ್ರಯುಕ್ತ ನಗರದ ಹೊರವಲಯದ ಟಮಕದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯು ಬಡವರಿಗೆಂದೇ ಉಚಿತವಾಗಿ ಆರೋಗ್ಯ ರಕ್ಷಾ ಕಾರ್ಡ್‌ಗಳನ್ನು ವಿತರಿಸುತ್ತಿದೆ. ಕಾರ್ಡುದಾರರಿಗೆ ಶೇ 50ರ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರಕಲಿದೆ ಎಂಬುದೇ ವಿಶೇಷ.

ನಗರದ 36 ವಾರ್ಡ್ ಮತ್ತು ಆಸ್ಪತ್ರೆ ಕಟ್ಟಡಕ್ಕೆ ಸ್ಥಳ ನೀಡಿದ ನಡುಪಳ್ಳಿಯ ಎಲ್ಲ ಕುಟುಂಬಗಳಿಗೆ ಸ್ತ್ರೀಶಕ್ತಿ ಸಂಘಗಳ ಮೂಲಕ ಈಗಾಗಲೇ 26,300 ಕಾರ್ಡ್ ಹಂಚಲಾಗಿದೆ. ಸಂಘಗಳ 150 ಮಹಿಳೆಯರು ಮನೆಮನೆಗೆ ತೆರಳಿ ಕಾರ್ಡುಗಳನ್ನು ಹಂಚಿದ್ದಾರೆ. ಕಾರ್ಡು ಪಡೆದ ನಡುಪಳ್ಳಿಯ 35 ಜನ ಈಗಾಗಲೇ ಚಿಕಿತ್ಸೆಯನ್ನೂ ಪಡೆದಿದ್ದಾರೆ. ಜ. 4ರಿಂದ ಕಾರ್ಡುಗಳನ್ನು ಹಂಚುತ್ತಿರುವ ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರಿಗೆ ಪ್ರತಿ ಕಾರ್ಡಿಗೆ 10 ರೂಪಾಯಿ ಗೌರವಧನವನ್ನೂ ನೀಡುತ್ತಿರುವುದು ಮತ್ತೊಂದು ವಿಶೇಷ.

ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ‘ಪ್ರಜಾವಾಣಿ’ಯೊಡನೆ ಮಾತನಾಡಿದ ದೇವರಾಜ ಅರಸ್ ವಿಶ್ವವಿದ್ಯಾಲಯದ ಟ್ರಸ್ಟಿ ಎಚ್.ಆಂಜಿನಪ್ಪ, ‘ಆಸ್ಪತ್ರೆ ನಿರ್ಮಾಣಕ್ಕೆ ಜಮೀನು ನೀಡಿದ ನಡುಪಳ್ಳಿಯ ಜನರಿಗೆ ಮತ್ತು ಕೋಲಾರ ನಗರದ ನಿವಾಸಿಗಳಿಗೆ, ಅಧ್ಯಕ್ಷ ಆರ್.ಎಲ್.ಜಾಲಪ್ಪ ಇಂಗಿತದಂತೆ ಮೊದಲ ಹಂತದಲ್ಲಿ ಕಾರ್ಡುಗಳನ್ನು ವಿತರಿಸಲಾಗುತ್ತಿದೆ. 26 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಿಸಲಾಗಿದೆ. ಕೊರತೆಯಾದರೆ ಇನ್ನಷ್ಟು ವಿತರಿಸಲಾಗುವುದು’ ಎಂದರು.

‘ಈಗ ವಿತರಿಸಲಾಗಿರುವ ಕಾರ್ಡುಗಳ ಜೊತೆ ವಿತರಿಸಬೇಕಾದ 7 ಸಾವಿರ ಕಾರ್ಡುಗಳಿವೆ. ಅವುಗಳೆಲ್ಲವನ್ನೂ ಜ. 20ರ ಒಳಗೆ ವಿತರಿಸುವ ಗುರಿ ಇದೆ. ನಂತರ, ಕಾರ್ಡ್ ವಿತರಣೆ ಸಂದರ್ಭದಲ್ಲಿ ವಿತರಕರು ಸಂಗ್ರಹಿಸಿದ ಮಾಹಿತಿಗಳನ್ನು ಪರಿಶೀಲಿಸಿ, ಕಂಪ್ಯೂಟರ್‌ಗೆ ಅಳವಡಿಸಲಾಗುವುದು. ಆಸ್ಪತ್ರೆಗೆ ಕಾರ್ಡುದಾರರು ಬಂದಾಗ ಅವರ ಮಾಹಿತಿ ಕೂಡಲೇ ಲಭ್ಯವಿರುವಂತೆ ವ್ಯವಸ್ಥೆಗೊಳಿಸಲಾಗುವುದು’ ಎಂದು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಬಿ.ಜಿ.ರಂಗನಾಥ್ ತಿಳಿಸಿದರು.

‘ಆಸ್ಪತ್ರೆಗೆ ರಕ್ಷಾ ಕಾರ್ಡ್ ತರುವ ಬಿಪಿಎಲ್ ಕಾರ್ಡುದಾರರಿಗೆ ಶೇ 50ರಷ್ಟು ಮತ್ತು ಎಪಿಎಲ್ ಕಾರ್ಡುದಾರರಿಗೆ ಚಿಕಿತ್ಸೆ ವೆಚ್ಚದಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು. ಟಮಕದಲ್ಲಿರುವ ಆಸ್ಪತ್ರೆ ಮತ್ತು ನಗರದ ಹೊಸ ಬಸ್‌ನಿಲ್ದಾಣದ ಬಳಿ ಇರುವ ಆಸ್ಪತ್ರೆಯ ಘಟಕದಲ್ಲಿ ಚಿಕಿತ್ಸೆ ಲಭ್ಯವಿದೆ’ ಎಂದರು.‘200ರಿಂದ 250 ಕುಟುಂಬಗಳು ಮಾತ್ರ ಕಾರ್ಡು ಪಡೆಯಲು ನಿರಾಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.