ADVERTISEMENT

ಬಡ್ತಿ ಮೀಸಲು: ‘ಸುಪ್ರೀಂ’ ಆದೇಶ ಪಾಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:06 IST
Last Updated 4 ಏಪ್ರಿಲ್ 2018, 20:06 IST
ಬಡ್ತಿ ಮೀಸಲು: ‘ಸುಪ್ರೀಂ’  ಆದೇಶ ಪಾಲಿಸಲು ನಿರ್ಧಾರ
ಬಡ್ತಿ ಮೀಸಲು: ‘ಸುಪ್ರೀಂ’ ಆದೇಶ ಪಾಲಿಸಲು ನಿರ್ಧಾರ   

ಬೆಂಗಳೂರು: ರಾಜ್ಯ ಸರ್ಕಾರದ ‘ಬಡ್ತಿ ಮೀಸಲು ಕಾಯ್ದೆ– 2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ 2017ರ ಫೆ. 9ರಂದು ನೀಡಿದ ತೀರ್ಪು ಚಾಚೂ ತಪ್ಪದೆ ಪಾಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಬುಧವಾರ ಸುತ್ತೋಲೆ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ‘ಆದೇಶ ಅನುಷ್ಠಾನಗೊಳಿಸಲು ಕೋರ್ಟ್‌ ಕಾಲಮಿತಿ ನಿಗದಿಪಡಿಸಿದೆ. ಹೀಗಾಗಿ, ಎಲ್ಲ ಇಲಾಖೆಗಳು ಕೋರ್ಟ್‌ ಆದೇಶದಂತೆ ತತ್ಪರಿಣಾಮ ಕ್ರಮ (ಹಿಂಬಡ್ತಿ– ಮುಂಬಡ್ತಿ) ಕಡ್ಡಾಯವಾಗಿ ಪೂರ್ಣಗೊಳಿಸಿ, ಇದೇ 16ರ ಒಳಗೆ ನನಗೆ ಅನುಸರಣಾ ವರದಿ ಸಲ್ಲಿಸಬೇಕು’ ಎಂದು ತಾಕೀತು ಮಾಡಿದ್ದಾರೆ.

ಆದೇಶ ಪಾಲಿಸುವ ನಿಟ್ಟಿನಲ್ಲಿ ಯಾವುದೇ ವಿಳಂಬ ಆಗದಂತೆ, ಎಲ್ಲ ಇಲಾಖೆಗಳು ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು. ವಿವಿಧ ವೃಂದಗಳಲ್ಲಿ ಹಿಂಬಡ್ತಿಗೆ ಒಳಗಾದವರ ಪಟ್ಟಿ ತಯಾರಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಮುಂಬಡ್ತಿ ಮೀಸಲಾತಿ ಆದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕ್ರಮವಾಗಿ ನಿಗದಿಪಡಿಸಿರುವ ಶೇ 15 ಮತ್ತು
ಶೇ 3 ಮುಂಬಡ್ತಿ ಮೀಸಲಾತಿ ಜಾರಿಯಲ್ಲಿ ಇರಲಿದೆ. ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಉದ್ದಿಮೆ, ಆಯೋಗಗಳು, ನಿಗಮ, ಮಂಡಳಿಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಸ್ಥೆಗಳಿಗೂ ಈ ಸುತ್ತೋಲೆ ಅನ್ವಯವಾಗುತ್ತದೆ ಎಂದೂ ಅವರು ವಿವರಿಸಿದ್ದಾರೆ.

7.30 ಲಕ್ಷ: ರಾಜ್ಯದಲ್ಲಿರುವ ಒಟ್ಟು ನೌಕರರ ಸಂಖ್ಯೆ

20,000ಕ್ಕೂ ಹೆಚ್ಚು: ಹಿಂಬಡ್ತಿ ಆತಂಕ ಎದುರಿಸುತ್ತಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.