ಬೆಂಗಳೂರು: ‘ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯನ್ನು ಬದಲಾಯಿಸಿರುವ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನಕ್ಕೆ ಮುಂದಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಟೀಕಿಸಿದರು.
‘ಇಲ್ಲಿಯವರೆಗೆ ಸತತ ನಾಲ್ಕು ವಾರಗಳ ಒಣ ಹವೆ, ಮಳೆ ಕೊರತೆ ಹಾಗೂ ತೇವಾಂಶ ಪ್ರಮಾಣ ಶೇ 20ಕ್ಕಿಂತ ಕಡಿಮೆ ಇದ್ದರೆ ಅಂತಹ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲು ಅವಕಾಶ ಇತ್ತು. ಮಾರ್ಗಸೂಚಿ ಬದಲಾಯಿಸಿದ್ದರಿಂದ ಕಷ್ಟದ ಸ್ಥಿತಿ ಎದುರಾಗಲಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಅವರು ಹೇಳಿದರು.
‘ಕಳೆದ ಮುಂಗಾರು ಹಂಗಾಮಿನಲ್ಲಿ 166 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿದ್ದು, ಬರಗಾಲದ ಛಾಯೆ ಇದೆ. ಹೊಸ ಮಾರ್ಗಸೂಚಿಯನ್ವಯ 38 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲು ಸಾಧ್ಯವಿದೆ’ ಎಂದೂ ಅವರು ಹೇಳಿದರು.
‘ವಾಡಿಕೆ ಮಳೆಯಲ್ಲಿ ಶೇ 50ಕ್ಕಿಂತಲೂ ಕಡಿಮೆ ಬಿದ್ದಿರಬೇಕು, ಉದ್ದೇಶಿತ ಗುರಿಗೆ ಹೋಲಿಸಿದರೆ ಶೇ50ಕ್ಕಿಂತಲೂ ಕಡಿಮೆ ಬಿತ್ತನೆಯಾಗಿರಬೇಕು, ಬೆಳೆ ಹಾನಿ ಪ್ರಮಾಣ ಶೇ 50ಕ್ಕಿಂತ ಹೆಚ್ಚಿರಬೇಕು. ಇದೆಲ್ಲದರ ಜತೆಗೆ ಅಂತರ್ಜಲ ಮಟ್ಟ ಕುಸಿತವನ್ನೂ ಲೆಕ್ಕ ಹಾಕಿ ಬರ ಘೋಷಣೆ ಮಾಡಬೇಕು’ ಎಂದು ಮಾರ್ಗಸೂಚಿ ಸೂಚಿಸಿದೆ. ಇದರ ಅನ್ವಯ ಯಾವುದೇ ಪ್ರದೇಶವನ್ನೂ ಬರಪೀಡಿತ ಎಂದು ಘೋಷಿಸಲು ಸಾಧ್ಯವೇ ಇಲ್ಲ’ ಎಂದರು.
‘ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಇರುವ ಸಚಿವ ಸಂಪುಟ ಉಪ ಸಮಿತಿಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಷಯ ಮಂಡಿಸಿ, ಕೇಂದ್ರಕ್ಕೆ ಮನವಿ ಸಲ್ಲಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು’ ಎಂದರು.
ವರದಿಗೆ ಸೂಚನೆ
‘ಮಳೆ ಇಲ್ಲದೇ ಇದ್ದರೂ ಜೋರಾಗಿ ಬೀಸುತ್ತಿರುವ ಗಾಳಿಯಿಂದ ಬೆಳೆ ಹಾನಿ ಸಂಭವಿಸಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಜಯಚಂದ್ರ ತಿಳಿಸಿದರು. ‘ತೆಂಗು ಮತ್ತು ಅಡಕೆ ಮರಗಳಿಗೆ ಹಾನಿಯಾಗಿದ್ದರಿಂದ ಶೇ33ರಷ್ಟು ಇಳುವರಿ ನಷ್ಟ ಆಗಲಿದೆ ಎಂಬ ಅಂದಾಜಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.