ಬೆಂಗಳೂರು: ‘ಬರಿಗಾಲಲ್ಲಿ ಚಿತ್ರರಂಗಕ್ಕೆ ಬಂದೆ. ಇಂದು ಅದೇ ಚಿತ್ರರಂಗವು ನನ್ನನ್ನು ಬೆಳ್ಳಿಹೆಜ್ಜೆಗೆ ಕರೆತಂದಿದೆ’ ಎಂದು ನಟ ಎಂ.ಕೆ.ಸುಂದರ್ರಾಜ್ ಹೇಳಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದ ಬಾದಾಮಿ ಹೌಸ್ನಲ್ಲಿ ಶನಿವಾರ ಏರ್ಪಡಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ನಾನು ಒಂದು ತರಹ ಜೇಡಿಮಣ್ಣಿನಂತೆ ಇದ್ದೆ. ಅದಕ್ಕೆ ಒಂದು ರೂಪು, ಆಕಾರವನ್ನು ನೀಡಿದವರು ಬಿ.ವಿ.ಕಾರಂತರು. ಅವರ ವ್ಯಕ್ತಿತ್ವ ನನ್ನನ್ನು ಬೆಳೆಸಿತು’ ಎಂದರು.
‘ಸೊಪ್ಪು ಮಾರುವವನಿಗೆ ಇರುವ ಆತ್ಮಗೌರವ ಕೋಟಿಗಟ್ಟಲೆ ಹಣಗಳಿಸುವ ಕಲಾವಿದರಿಗೆ ಇಲ್ಲದಂತಾಗಿದೆ. ನನ್ನ ಬದುಕಿನಲ್ಲಿ ಯಾವುದನ್ನೂ ಬಯಸಲಿಲ್ಲ. ಅನಿವಾರ್ಯವಾಗಿ ಬದುಕು ನೀಡಿದ್ದನ್ನು ಒಪ್ಪಿಕೊಳ್ಳಬೇಕಾಯಿತು. ಸರಿಯಾಗಿ ಓದಲಿಲ್ಲ. ಆದರೆ, ನಾಟಕದ ಅಭಿನಯಕ್ಕೆ ಸೇರಿದ್ದ ಕಾರಣ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಸಹಾಯವಾಯಿತು’ ಎಂದರು.
‘1984ರ ನಂತರ ಚಿತ್ರಗಳು ಕಡಿಮೆಯಾದವು. ಆಗ ಬಿಸ್ಲೇರಿ ವ್ಯಾಪಾರ ಆರಂಭಿಸಿದೆ. ಮೊದಲು ಚೆನ್ನಾಗಿಯೇ ಇತ್ತು. ಆದರೆ, ಮತ್ತೆ ಸಿನಿಮಾದವರ ಸಹವಾಸದಿಂದ ವ್ಯಾಪಾರ ಮುಚ್ಚಬೇಕಾಯಿತು. ನಮ್ಮವರು ಒಳ್ಳೆಯದು ಮಾಡದೆ ಇದ್ದರೂ, ಯಾರಿಗೂ ಸಾಲವನ್ನು ನೀಡಬಾರದೆಂಬ ಒಳ್ಳೆಯ ಪಾಠ ಕಲಿಸಿದರು’ ಎಂದು ಹೇಳಿದರು.
ಸುಂದರ್ರಾಜ್ ಪತ್ನಿ, ನಟಿ ಪ್ರಮೀಳಾ ಜೋಷಾಯ್ ಮಾತನಾಡಿ, ‘ನಮ್ಮದು ಸಂಪ್ರದಾಯಸ್ಥ ಕುಟುಂಬ. ಸಿನಿಮಾ ಸೇರುವುದು, ಬಣ್ಣ ಹಚ್ಚುವುದನ್ನು ವಿರೋಧಿಸುತ್ತಿದ್ದರು. ಆದರೆ, ನನ್ನದು ಹಠದ ಸ್ವಭಾವ. ಅದೇ ಇಲ್ಲಿಯವರೆಗೂ ನನ್ನ ಕೈ ಹಿಡಿದಿದೆ’ ಎಂದರು.
‘ನಾಯಕಿಯಾಗಿ ನಟಿಸಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಕೆಲವು ನಾಯಕರು ನಾನು ನಾಯಕಿ ಎಂದ ಕೂಡಲೇ ಹಿಂದೇಟು ಹಾಕುವುದು, ಅವಳು ಬೇಡ ಬೇರೆ ಯಾರನ್ನಾದರೂ ನಾಯಕಿ ಮಾಡಿ ಎಂದು ಹೇಳುತ್ತಿದ್ದುದು ಸ್ವತಃ ನನ್ನ ಕಿವಿಗೆ ಬಿದ್ದಿದೆ. ಇದರಿಂದ, ಬಹಳ ಬೇಸರವಾಗುತ್ತಿತ್ತು. ಇದು ಕೂಡ ನಾನು ನಾಯಕಿ ನಟಿಯಾಗದಿರಲು ಒಂದು ಕಾರಣವಾಯಿತು. ಆಗ ಕೆಲವೇ ನಾಯಕ ನಟಿಯರಿದ್ದರು.
ಆದರೂ, ಕಲಾವಿದರಲ್ಲಿ ರಾಜಕೀಯವಿತ್ತು. ಹೊಸ ನಾಯಕಿಯರನ್ನು ಬೆಳೆಯದಂತೆ ಮಾಡುವ ಮತ್ಸರದ ಗುಣವೂ ಇತ್ತು. ಇದರಿಂದ, ನಾನು ಬಹಳ ನೋವು ಅನುಭವಿಸಬೇಕಾಯಿತು. ಜೀವನ ಹೂವಿನಂತಿರದೆ, ಅದರಲ್ಲಿ ಮುಳ್ಳುಗಳು ಇದ್ದವು’ ಎಂದು ಪ್ರಮೀಳಾ ಜೋಷಾಯ್ ಅವರು ಕಣ್ಣೀರಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.