ADVERTISEMENT

ಬಲರಾಮ ಬಳಗಕ್ಕೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST
ಬಲರಾಮ ಬಳಗಕ್ಕೆ ಬೀಳ್ಕೊಡುಗೆ
ಬಲರಾಮ ಬಳಗಕ್ಕೆ ಬೀಳ್ಕೊಡುಗೆ   

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಗಜಪಡೆಯನ್ನು ಭಾನುವಾರ ಬೀಳ್ಕೊಡಲಾಯಿತು.
ಚಿನ್ನದ ಅಂಬಾರಿ ಹೊತ್ತ ಬಲರಾಮ ಸೇರಿದಂತೆ 13 ಆನೆಗಳಿಗೆ ಅರಮನೆಯ ಅಂಗಳದಿಂದ ಕಾಡಿನ ಶಿಬಿರಗಳಿಗೆ ಕಳಿಸಿಕೊಡಲಾಯಿತು.

ಆಗಸ್ಟ್ 11 ರಂದು ಮೊದಲ ತಂಡ ಮತ್ತು ಒಂದು ತಿಂಗಳ ನಂತರ ಮತ್ತೊಂದು ತಂಡದಲ್ಲಿ ಆನೆಗಳು ಆಗಮಿಸಿದ್ದವು. ಒಟ್ಟು 14 ಆನೆಗಳ ತಂಡದಲ್ಲಿದ್ದ ಹೆಣ್ಣಾನೆ ಸರಳ ಗರ್ಭಿಣಿ ಎಂಬ ಕಾರಣದಿಂದ ಮರಳಿ ಶಿಬಿರಕ್ಕೆ ಕಳುಹಿಸಲಾಗಿತ್ತು.

ಭಾನುವಾರ ಬೆಳಿಗ್ಗೆ ಅರಮನೆ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ 13 ಆನೆಗಳ ಮಾವುತರು ಮತ್ತು ಕಾವಾಡಿಗಳ ಕುಟುಂಬಕ್ಕೆ ಹೊಸ ಬಟ್ಟೆಗಳು, ಮಕ್ಕಳಿಗೆ ಪುಸ್ತಕ, ಸಿಹಿ, ಹಣ್ಣುಗಳನ್ನು ನೀಡಿ ಸತ್ಕರಿಸಲಾಯಿತು. ಮಾವುತರು ಮತ್ತು ಕಾವಾಡಿಗಳಿಗೆ ತಲಾ ಐದು ಸಾವಿರ ರೂಪಾಯಿ ಗೌರವಧನವನ್ನೂ ಈ ಸಂದರ್ಭದಲ್ಲಿ ಕೊಡಲಾಯಿತು.  ಎಲ್ಲ ಕುಟುಂಬಗಳ ಸದಸ್ಯರಿಗೆ ಚಹಾ ಕೂಟವನ್ನೂ ಏರ್ಪಡಿಸಲಾಗಿತ್ತು.

ನಂತರ ಲಾರಿಗಳಲ್ಲಿ ಆನೆಗಳನ್ನು ಬಂಡೀಪುರ, ಬಳ್ಳೆ, ದುಬಾರೆ, ಕೆ.ಗುಡಿ ಶಿಬಿರಗಳಿಗೆ ಕಳುಹಿಸಲಾಯಿತು. ಮಾವುತ ಮತ್ತು ಕಾವಾಡಿ ಕುಟುಂಬಗಳು ಮತ್ತು ಸರಂಜಾಮುಗಳನ್ನೂ ಪ್ರತ್ಯೇಕ ಲಾರಿಗಳಲ್ಲಿ ರವಾನಿಸಲಾಯಿತು.

ಮುಂದಿನ ವರ್ಷ ಅರ್ಜುನ  ಮುಂದಿನ ವರ್ಷದ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಕೆಲಸದಿಂದ ಬಲರಾಮನಿಗೆ ಮುಕ್ತಿ ನೀಡಿ, ಅರ್ಜುನನಿಗೆ ಈ ಜವಾಬ್ದಾರಿಯನ್ನು ವಹಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.

ಬಲರಾಮನಿಗೆ ಈಗಾಗಲೇ 53 ವಯಸ್ಸಾಗಿದೆ. ಅರ್ಜುನ ಎಲ್ಲ ರೀತಿಯಿಂದಲೂ ಶಕ್ತಿವಂತನಾಗಿದ್ದು, ಸಮರ್ಥನೂ ಆಗಿದ್ದಾನೆ. ಆದ್ದರಿಂದ ಅರ್ಜುನನಿಗೇ ಅಂಬಾರಿ ಹೊರುವ ಜವಾಬ್ದಾರಿ ನೀಡಲು ಚಿಂತಿಸಲಾಗುತ್ತಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.