ADVERTISEMENT

ಬಳ್ಳಾರಿಗೆ ಕೇಂದ್ರ ಅಧ್ಯಯನ ತಂಡದ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 11:25 IST
Last Updated 5 ಜನವರಿ 2012, 11:25 IST

ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ಜಿಲ್ಲೆಯ ಅರಣ್ಯ ಮತ್ತು ಪರಿಸರದ ಮೇಲೆ ಉಂಟಾದ ದುಷ್ಪರಿಣಾಮಗಳ ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲೆಗೆ ಆಗಮಿಸಿರುವ ಕೇಂದ್ರದ ಪರಿಸರ ಅಧ್ಯಯನ ತಂಡವು, ಗುರುವಾರ ಹೊಸಪೇಟೆ ಬಳಿಯ ಆರ್ ಬಿಎಸ್ಎಸ್ ಎನ್ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ನಿರ್ದೇಶಕ ಡಾ. ವಿ.ಕೆ.ಬಹುಗುಣ ನೇತೃತ್ವದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಇನ್ಸಿಟಿಟ್ಯೂಟ್ ನ ಪ್ರಾದೇಶಿಕ ನಿರ್ದೇಶಕ ಪಂಕಜ್ ಅಗರ್ ವಾಲ್ ಸೇರಿದಂತೆ 12 ಜನ ತಜ್ಞರು ಈ ಅಧ್ಯಯನ ತಂಡದಲ್ಲಿದ್ದಾರೆ.

ಇದಕ್ಕೂ ಮೊದಲು, ಈ ಅಧ್ಯಯನ ತಂಡದ ಸದಸ್ಯರು ತೋರಣಗಲ್ಲಿನ ಜೆಎಸ್ ಡಬ್ಲೂ ಉಕ್ಕಿನ ಕಾರ್ಖಾನೆಯ ಸಂಭಾಂಗಣದಲ್ಲಿ  ಮಧ್ಯಾಹ್ನದವರೆಗೆ ಜಿಲ್ಲೆಯ ಅರಣ್ಯ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.

ADVERTISEMENT

ಈ ತಂಡವು ಜನವರಿ 12ರವರೆಗೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬಳ್ಳಾರಿಯ ನಂತರ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಗಣಿ ಪ್ರದೇಶಗಳಿಗೆ ಭೇಟಿ ಕೊಡಲಿದೆ.

ಜಿಲ್ಲೆಯ ಪರಿಸರ ಮತ್ತು ಜನಜೀವನದ ಮೇಲೆ ಅಕ್ರಮ ಗಣಿಗಾರಿಕೆಯಿಂದ ಉಂಟಾದ ದುಷ್ಪರಿಣಾಮಗಳ ಅಧ್ಯಯನ ಮಾಡುವುದರ ಜೊತೆಗೆ ಈ ತಂಡವು  ಪರಿಸರಕ್ಕೆ ಮುಂಚಿನ ಹಸಿರನ್ನು ತುಂಬಿ ನೈಸರ್ಗಿಕ ಪರಿಸರವನ್ನು ಅಭಿವೃದ್ಧಿಸುವ ಹಾಗೂ ಇಲ್ಲಿನ ಜನತೆಯ ಆರೋಗ್ಯ ಸುಧಾರಣೆ ಕುರಿತು ಸಲಹೆಗಳನ್ನು ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.