ADVERTISEMENT

ಬಿಎಸ್‌ವೈ ಜಾಮೀನು ಅರ್ಜಿ ಆದೇಶ ಪ್ರಕಟ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST

ಬೆಂಗಳೂರು: ನಿರೀಕ್ಷಣಾ ಜಾಮೀನು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಗುರುವಾರ ಪ್ರಕಟಿಸುವುದಾಗಿ ಹೈಕೋರ್ಟ್ ತಿಳಿಸಿದೆ.

ಬುಧವಾರ ಆದೇಶ ಹೊರಡಿಸುವುದಾಗಿ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಹೇಳಿದ್ದರು. ಅದರಂತೆ ಮಧ್ಯಾಹ್ನ 2.30ಕ್ಕೆ ಆದೇಶದ ಉಕ್ತಲೇಖನ (ಡಿಕ್ಟೇಷನ್) ಆರಂಭಗೊಳ್ಳಬೇಕಿತ್ತು. ನ್ಯಾಯಾಲಯದ ವಿಚಾರಣಾ ಪಟ್ಟಿಯಲ್ಲಿ (ಕಾಸ್ ಲಿಸ್ಟ್) ಕೂಡ ಇದು ಉಲ್ಲೇಖಗೊಂಡಿತ್ತು.

ಆದರೆ, ನ್ಯಾಯಮೂರ್ತಿಗಳು `ಇಂದು (ಬುಧವಾರ) ಉಕ್ತಲೇಖನ ನೀಡುವುದಿಲ್ಲ. ನಾಳೆ ನೀಡುತ್ತೇನೆ~ ಎಂದರು.

ಜಿಂದಾಲ್ ಸಮೂಹದ ಗಣಿ ಕಂಪೆನಿಯಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ. ರಾಘವೇಂದ್ರ ಬಿ.ವೈ. ವಿಜಯೇಂದ್ರ ಹಾಗೂ ಅಳಿಯ ಸೋಹನ್‌ಕುಮಾರ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಇದಾಗಿದೆ.

ಸಿಬಿಐ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಅವರೆಲ್ಲ ಹೈಕೋರ್ಟ್ ಮೊರೆ ಹೋಗಿದ್ದಾರೆ. ಬುಧವಾರ ಆದೇಶ ಹೊರಬೀಳಲಿದೆ ಎಂಬ ಹಿನ್ನೆಲೆಯಲ್ಲಿ ವಕೀಲರು ಹಾಗೂ ಮಾಧ್ಯಮ ಪ್ರತಿನಿಧಿಗಳಿಂದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ನ್ಯಾಯಮೂರ್ತಿಗಳು ಏನು ಹೇಳಿದರು ಎಂದು ತಿಳಿಯದೆ ಕೆಲ ನಿಮಿಷಗಳ ಕಾಲ ಸಭಾಂಗಣದಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.