ಲಕ್ಷ್ಮೇಶ್ವರ (ಗದಗ ಜಿಲ್ಲೆ): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಗೆಗಿನ ತಮ್ಮ ಒಲವು ತೋರಲು ವೇದಿಕೆಯನ್ನು ಬಳಸಿಕೊಂಡ ವಿವಿಧ ಮಠಾಧೀಶರು, `ಯಡಿಯೂರಪ್ಪನವರು ವೀರಶೈವ ಧರ್ಮದ ಸಾಮ್ರಾಟ, ಪ್ರಶ್ನಾತೀತ ನಾಯಕ~ ಎಂದೆಲ್ಲ ಬಣ್ಣಿಸಿದರು.
ಸಮೀಪದ ಭೂಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುಭವನ ಉದ್ಘಾಟಿಸಿ ಹಾಗೂ ಮೂರು ಕೋಟಿ ಲಿಂಗಗಳ ಪ್ರತಿಷ್ಠಾಪನೆಗೆ ಭೂಮಿಪೂಜೆ ನೆರವೇರಿಸಿದ ಯಡಿಯೂರಪ್ಪ ಅವರನ್ನು ಹೊಗಳಿ ಮಠಾಧೀಶರು ಮಾತನಾಡಿದರು.
ಬಳ್ಳಾರಿಯ ಯಂಬಿಗನೂರು ಸ್ವಾಮೀಜಿ ಮಾತನಾಡಿ, `ಯಡಿಯೂರಪ್ಪ ವೀರಶೈವ ಧರ್ಮದ ವಿಭೀಷಣ ಎಂದು ಕರೆದರು. ಇವತ್ತು ವೀರಶೈವರ ಬಲ ಹೆಚ್ಚಾಗುತ್ತಿದೆ ಎನ್ನುವ ಸಲುವಾಗಿ ಅವರು ವಿಧಾನಸೌಧದ ಮೆಟ್ಟಿಲೇರುವುದನ್ನು ತಡೆಯುವ ಹುನ್ನಾರ ನಡೆದಿದೆ. ಆದರೆ ವೀರಶೈವರ ಸಹಕಾರವಿಲ್ಲದೆ ಯಾರೊಬ್ಬರೂ ವಿಧಾನಸೌಧದ ಮೆಟ್ಟಿಲೇರಲು ಸಾಧ್ಯವಿಲ್ಲ~ ಎಂದರು.
ಕಲಾದಗಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮನಿ ಸ್ವಾಮೀಜಿ ಇದಕ್ಕೆ ಧ್ವನಿಗೂಡಿಸಿದರು.
ಅಮಾವಾಸ್ಯೆಯೊಂದಿಗೆ ಕತ್ತಲು ಕಳೆದಿದೆ: ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ~ಎಲ್ಲವೂ ವಿಧಿಲಿಖಿತ. ಅಂತೆಯೇ, ಶಿವರಾತ್ರಿಯ ಅಮಾವಾಸ್ಯೆ ಯೊಂದಿಗೆ ಯಡಿಯೂರಪ್ಪನವರ ಬದುಕಿನ ತೊಡರುಗಳು ನಿವಾರಣೆಗೊಳ್ಳಲಿವೆ. ನಾಳೆಯಿಂದ ಹೊಸ ಬೆಳಕು ಮೂಡಲಿದೆ~ ಎಂದು ಮಾರ್ಮಿಕವಾಗಿ ನುಡಿದರು.
ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಶ್ರೀಶೈಲಪ್ಪ ಬಿದರೂರ, ಚಂದ್ರಕಾಂತ ಬೆಲ್ಲದ, ಎಸ್.ಐ. ಚಿಕ್ಕನಗೌಡ್ರ, ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.