ADVERTISEMENT

ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ಕಾಳ್ಗಿಚ್ಚು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಯಳಂದೂರು: ತಾಲ್ಲೂಕಿನ ಹುಲಿ ಅಭಯಾರಣ್ಯದ ಮಾನ್ಯತೆ ಪಡೆದ ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ಭಾನುವಾರ ನಾಲ್ಕಾರು ಕಡೆ ಚದುರಿದಂತೆ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡಿತು.

ಚಾಮರಾಜನಗರಕ್ಕೆ ತೆರಳುವ ಹೊಸಪೋಡು ಕಾಡಿನಲ್ಲಿ ಶನಿವಾರ ಹೊಗೆ ಕಂಡುಬಂದು ಸ್ಪಲ್ಪ ಪ್ರದೇಶ ದಹನವಾಗಿದ್ದು, ಭಾನುವಾರ ಮಧ್ಯಾಹ್ನದ ವೇಳೆಗೆ ಅಗ್ನಿ ನಂದಿ ಹೋಗಿದೆ. ಬಿಆರ್‌ಟಿ ಪರಿಸರದ ನಾಲ್ಕು ದಿಕ್ಕಿನಲ್ಲಿ ಚದುರಿದಂತೆ ಹೊಗೆ ಭುಗಿಲೆದ್ದಿತ್ತು. ಈಗಾಗಲೇ ಒಂದೆರಡು ಬಾರಿ ಮಳೆ ಆಗಬೇಕಾಗಿತ್ತು. ಕಳೆದ ವರ್ಷ ಈ ವೇಳೆಗೆ ವಾತಾವರಣ ತಂಪಾದ ಕಾರಣ ಕಾಡು ಅಗ್ನಿಗೆ ತುತ್ತಾಗಿರಲ್ಲಿಲ್ಲ. ಆದರೆ ಈ ಬಾರಿ ತಾಪಮಾನದಲ್ಲಾದ ಹೆಚ್ಚಳವೂ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿದೆ.

ಪುರಾಣಿಪೋಡಿನ ಹಿಂಭಾಗದ ಕಾನನದಲ್ಲೂ ದಟ್ಟ ಹೊಗೆ ಆವರಿಸಿತ್ತು. ಬೆಲ್ಲವತ್ತ ಡ್ಯಾಂನ ಪಕ್ಕದ ಗುಡ್ಡದಿಂದಲೂ ಹೊಗೆ ಭುಗಿಲೆದ್ದಿತ್ತು. ರಾಮಕೃಷ್ಣ ಕುಟೀರದ ಬಳಿಯೂ ಕಾಡಿನ ಸ್ವಲ್ಪ ಭಾಗ ದಹಿಸಿದೆ. ಈಗಾಗಲೇ ಅರಣ್ಯ ಸಂರಕ್ಷಕರು ಅಗ್ನಿ ನಂದಿಸುವ ಕಾರ್ಯದಲ್ಲಿ ಸಕ್ರಿಯವಾಗಿರುವುದು ಅಲ್ಲಲ್ಲಿ ಕಂಡು ಬರುತ್ತಿತ್ತು.

`ಶನಿವಾರ ಸಂಜೆ ವೇಳೆ ಯರಕನಗದ್ದೆ ಕಾಲೋನಿ ಬಳಿ ಇರುವ ಖಾಸಗಿಯವರ ಜಮೀನಿಗೆ ಬೆಂಕಿ ಬಿದ್ದಿದೆ. 30 ಜನರ ತಂಡದ ಅರಣ್ಯ ಸಿಬ್ಬಂದಿ ತಕ್ಷಣವೇ ಇದನ್ನು ನಂದಿಸಿದ್ದರಿಂದ ದೊಡ್ಡ ಅವಘಡವಾಗಿಲ್ಲ.

ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಮ್ಮ ಸಿಬ್ಬಂದಿ ಕಣ್ಗಾವಲಿನಿಂದ ಕಾಯುತ್ತಿದ್ದು, ಅರಣ್ಯ ಪ್ರದೇಶಕ್ಕೆ ಹೆಚ್ಚಿನ ಹಾನಿಯಾಗಿಲ್ಲ~ ಎಂದು ಆರ್‌ಎಫ್‌ಓ ನಾಗರಾಜು `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.