ADVERTISEMENT

ಬೆಳೆ ಹಾನಿ: ನಾಳೆಯಿಂದ ಕೇಂದ್ರ ತಂಡ ಪ್ರವಾಸ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಬೆಂಗಳೂರು: ಇತ್ತೀಚಿನ ಅಕಾಲಿಕ ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಅಧ್ಯಯನಕ್ಕಾಗಿ ಕೇಂದ್ರದ ಮೂರು ತಂಡಗಳು ಶನಿವಾರ ಮತ್ತು ಭಾನುವಾರ ರಾಜ್ಯದಲ್ಲಿ ಪ್ರವಾಸ ಮಾಡಲಿವೆ.

ಕೃಷಿ ಇಲಾಖೆ ವ್ಯಾಪ್ತಿಯ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ವಸುಧಾ ಮಿಶ್ರಾ, ಯೋಜನಾ ಆಯೋಗದ ಉಪ ಸಲಹೆಗಾರ ಮಾನಸ್‌ ಚೌಧುರಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಪ್ರಸನ್ನ ವಿ.ಸಾಲಿಯಾನ ಈ ತಂಡಗಳ ನೇತೃತ್ವ ವಹಿಸಿದ್ದಾರೆ.

ಇವು ಬೆಳಗಾವಿ, ವಿಜಾಪುರ, ಬಾಗಲಕೋಟೆ, ಬೀದರ್‌, ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ.
ಮಿಶ್ರಾ ಮತ್ತು ಚೌಧುರಿ ನೇತೃತ್ವದ ತಂಡಗಳು ಬೆಳಗಾವಿಯಲ್ಲಿ ಮೊದಲ ದಿನ ಜಂಟಿ ಪ್ರವಾಸ ಮಾಡಿ ನಷ್ಟದ ಬಗ್ಗೆ ಅಂದಾಜು ಮಾಡಲಿವೆ.

ಮಿಶ್ರಾ ನತಂಡ ಶನಿವಾರ ಸಂಜೆ ವಿಜಾಪುರ ಮತ್ತು ಭಾನುವಾರ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ. ಚೌಧುರಿ ನೇತೃತ್ವದ ತಂಡ ಬೆಳಗಾವಿ ಬಳಿಕ ಬಾಗಲಕೋಟೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಸನ್ನ ನೇತೃತ್ವದ 3ನೇ ತಂಡ ಶನಿವಾರ ಬೆಳಿಗ್ಗೆ ಹೈದರಾಬಾದ್‌ ಮಾರ್ಗವಾಗಿ ರಾಜ್ಯ ಪ್ರವೇಶಿಸಲಿದೆ. ಮೊದಲ ದಿನ ಬೀದರ್‌ ಮತ್ತು ಗುಲ್ಬರ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ. ಭಾನುವಾರ ಗುಲ್ಬರ್ಗದ ಕೆಲವು ತಾಲ್ಲೂಕು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ ಎಂದು ಗೊತ್ತಾಗಿದೆ.
ಸೋಮವಾರ ನಗರಕ್ಕೆ ವಾಪಸಾಗುವ ಮೂರೂ ತಂಡಗಳು ಮುಖ್ಯಮಂತ್ರಿ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಸಭೆ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.