ADVERTISEMENT

ಬ್ಯಾನರ್ ತೆರವು: ಬಿಜೆಪಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 7:44 IST
Last Updated 6 ಮಾರ್ಚ್ 2018, 7:44 IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ  ನಗರದ ವಿವಿಧೆಡೆ ಹಾಕಿರುವ ಬ್ಯಾನರ್ ಫ್ಲೆಕ್ಸ್ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ಬೆಳಿಗ್ಗೆ ಆರಂಭಿಸಿದ್ದು, ಜನಸುರಕ್ಷಾ ಯಾತ್ರೆಗೆ ಸಂಬಂಧಿಸಿದ‌ ಬ್ಯಾನರ್ ತರವುಗೊಳಿಸದಂತೆ ಬಿಜೆಪಿ‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

ನಗರದಾದ್ಯಂತ ಬ್ಯಾನರ್ ಫ್ಲೆಕ್ಸ್ ಗಳನ್ನು ನಿಯಂತ್ರಿಸುವಂತೆದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕುಮಾರ್ ಸೆಂಥಿಲ್ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಕಾರ್ಯಾಚರಣೆ ಶುರು ಮಾಡಿತ್ತು.

ನಗರದ ಬಲ್ಮಠ ಬಳಿ ಬ್ಯಾನರ್ ಗಳನ್ನು ತೆರವುಗೊಳಿಸದಂತೆ ಕಾರ್ಯಕರ್ತರು ತಡೆದಿದ್ದು, ಬಿಜೆಪಿ ಜಿಲ್ಲಾ‌ ಘಟಕದ‌ ವಕ್ತಾರ‌ ಮೋನಪ್ಪ ಭಂಡಾರಿ , ಜನಸುರಕ್ಷಾ ಯಾತ್ರೆಯ ಯಶಸ್ಸಿನ್ನು ತಡೆಯಲು ಮಾಡುವ ಪಿತೂರಿ ಇದಾಗಿದೆ ಎಂದರು.

ADVERTISEMENT

ಈ ಹಿಂದೆಯೂ ನಗರದಲ್ಲಿ ಕಾಂಗ್ರೆಸ್ ನ ಸಮಾವೇಶಗಳಾದಾಗ ಬ್ಯಾನರ್ ಬಂಟಿಂಗ್ ಗಳನ್ನು ವ್ಯಾಪಕವಾಗಿ ಕಟ್ಟಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಮೌನವಾಗಿದ್ದ ಜಿಲ್ಲಾಡಳಿತಕ್ಕೆ ಜನಸುರಕ್ಷಾ ಯಾತ್ರೆಯ ಸಂದರ್ಭದಲ್ಲಿ ಮಾತ್ರ ತೆರವು ಮಾಡಬೇಕೆಂಬ ಪ್ರೇರಣೆ ಬಂದಿದ್ದು ಯಾಕೆ ಎಂದು ಪ್ರಶ್ನಿಸಿದರು.

'ಮಡಿಕೇರಿಯಿಂದ ಮಾರ್ಚ್ 3 ರಂದು ಹೊರಟ ಯಾತ್ರೆಯಲ್ಲಿ ದನ ಕಳ್ಳಸಾಗಾಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೆಂಬಲ ನೀಡುತ್ತಿರುವ ದುಸ್ಥಿತಿಯನ್ನು ಬಿಂಬಿಸುವ ಟ್ಯಾಬ್ಲೊ ಇತ್ತು. ಸುಳ್ಯ‌ ಪ್ರವೇಶಿಸುತ್ತಲೇ ಅದನ್ನು ವಿನಾ ಕಾರಣ  ವಶಪಡಿಸಿಕೊಳ್ಳಲಾಯಿತು. ಜನ ಸುರಕ್ಷಾ ಯಾತ್ರೆಯ ಮೂಲಕ ಜನರಿಗೆ  ವಾಸ್ತವ ದರ್ಶನ ಆಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಆತಂಕ ಶುರುವಾಗಿದೆ‌. ಆದ್ದರಿಂದಲೇ ಇಂತಹ  ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.