ADVERTISEMENT

ಭಟ್ಕಳಕ್ಕೆ ಎಟಿಎಸ್ ತಂಡ: ಆರೋಪಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಭಟ್ಕಳ: ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಗಳ ಪಟ್ಟಿಯಲ್ಲಿ ಭಟ್ಕಳ ಮೂಲದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸ್ಥಾಪಕ ರಿಯಾಜ್ ಭಟ್ಕಳ್ ಅಲಿಯಾಸ್ ರಿಯಾಜ್ ಇಸ್ಮಾಯಿಲ್ ಶಾಬಂದ್ರಿಯ ಹೆಸರು ಸೇರ್ಪಡೆಯಾಗಿದೆ.

ಪುಣೆಯ ಜರ್ಮನ್ ಬೇಕರಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪುಣೆಯ ಪ್ರಥಮ ದರ್ಜೆ ನ್ಯಾಯಾಲಯವು ಆರೋಪಿಗಳ ಪಟ್ಟಿಯಲ್ಲಿ ಹಿಮಾಯತ್ ಬೇಗ್ ಮತ್ತು ಸಹಚರರ ಜತೆಗೆ ಆರೋಪ ಪಟ್ಟಿಯಲ್ಲಿರುವ ರಿಯಾಜ್ ಭಟ್ಕಳ್ ತಲೆಮರೆಸಿಕೊಂಡಿರುವ ಆರೋಪಿ ಎಂದು ಪರಿಗಣಿಸಿ ಆದೇಶವೊಂದನ್ನು ಜಾರಿಗೊಳಿಸಿದೆ.

ಈತ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಮಾಹಿತಿಗಾಗಿ ಇಲ್ಲಿನ ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎ.ಟಿ.ಎಸ್. ಅಧಿಕಾರಿಗಳು ನ್ಯಾಯಾಲಯದ ಆದೇಶದ ಪ್ರತಿಗಳನ್ನು ಲಗತ್ತಿಸಿದ್ದಾರೆ.

ADVERTISEMENT

ಭಾನುವಾರ ಭಟ್ಕಳಕ್ಕೆ ಬಂದ ಪುಣೆಯ ಎ.ಟಿ.ಎಸ್ ಅಧಿಕಾರಿಗಳು ಭಟ್ಕಳದ ತೆಂಗಿನಗುಂಡಿ ಕ್ರಾಸ್‌ನಲ್ಲಿರುವ ರಿಯಾಜ್ ಭಟ್ಕಳನ ಮನೆಗೆ ತೆರಳಿ ಆತನ ತಂದೆಗೆ ಆದೇಶದ ಪ್ರತಿಯನ್ನು ಜಾರಿಗೊಳಿಸಿದೆ.

ಪುರಸಭೆ, ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ, ಪೊಲೀಸ್ ಠಾಣೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಕಾಣುವಂತೆ ಆದೇಶದ ಪ್ರತಿಯನ್ನು ಲಗತ್ತಿಸಿದ್ದಾರೆ.

ಜರ್ಮನ್ ಬೇಕರಿ ಸೇರಿದಂತೆ ದೇಶದ ಹಲವೆಡೆ ನಡೆದ ಸ್ಫೋಟದ ಪ್ರಕರಣಗಳಲ್ಲಿ ರಿಯಾಜ್ ಭಟ್ಕಳ ಮತ್ತು ಆತನ ಸಹೋದರ ಇಕ್ಬಾಲ್ ಭಟ್ಕಳ್ ಹೆಸರು ಬಹಿರಂಗವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.