ADVERTISEMENT

ಭೂಮಿ ಸ್ವಾಧೀನಕ್ಕೆ ರೈತರ ವಿರೋಧ:ಪೋಸ್ಕೊ: ನಿರಾಣಿ ಹೇಳಿಕೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST

ಗದಗ: ಪೋಸ್ಕೊ ಕಾರ್ಖಾನೆ ಸ್ಥಾಪಿಸಲು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ. ಒಂದು ವೇಳೆ ಭೂಮಿ ವಶಪಡಿಸಿಕೊಳ್ಳಲು ಸರ್ಕಾರ ಮುಂದಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹಳ್ಳಿಗುಡಿಯ ರೈತರು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ರೈತ ಮುಖಂಡ ಹನುಮಂತಪ್ಪ ಗಡ್ಡದ, `ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪೋಸ್ಕೊ ಮುಗಿದ ಅಧ್ಯಾಯ ಎಂದಿದ್ದಾರೆ. ಜಿಲ್ಲಾಧಿಕಾರಿ ಸಹ ಖುದ್ದಾಗಿ ಬಂದು ಹೇಳಿಕೆ ನೀಡಿ ಹೋಗಿದ್ದಾರೆ. ಹೀಗಿರುವಾಗ  ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೋಸ್ಕೊ ಪರವಾಗಿ 127 ಮಂದಿ ಸಹಿ ಮಾಡಿದರೆ, ವಿರುದ್ಧವಾಗಿ 147 ಮಂದಿ ಸಹಿ ಮಾಡಿದ್ದಾರೆ. ಪ್ರಾಣ ಹೋದರೂ ಸರಿ ಭೂಮಿಯನ್ನು ಪೋಸ್ಕೊಗೆ ಕೊಡುವುದಿಲ್ಲ. ಪ್ರಗತಿ ಪರ ಸಂಘನೆಗಳು, ತೋಂಟದಾರ್ಯ ಸ್ವಾಮೀಜಿ ಹಾಗೂ ರೈತ ಸಂಘಟನೆ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಮುಖಂಡರಾದ ತೋಟಪ್ಪ, ಶಿವಪ್ಪ, ಮಹೇಶ, ಶಿವಗಂಗಮ್ಮ, ಸಿದ್ಧಲಿಂಗಯ್ಯ ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಹೊರಟ್ಟಿ ಎಚ್ಚರಿಕೆ (ಹುಬ್ಬಳ್ಳಿ ವರದಿ): `ಗದಗ ಜಿಲ್ಲೆಯಲ್ಲಿ ಪೋಸ್ಕೊ ಕೈಗಾರಿಕೆ ಸ್ಥಾಪಿಸುವ ಹುಚ್ಚು ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರೈತರೊಂದಿಗೆ ಹೋರಾಟ ನಡೆಸಬೇಕಾಗುತ್ತದೆ~ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ವಿಷಯವಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಪತ್ರ ಬರೆದಿರುವ ಅವರು, `ಗದಗ ಜಿಲ್ಲೆಯಲ್ಲಿಯೇ ಪೋಸ್ಕೊ ಕಂಪೆನಿಗೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು  ಮುರುಗೇಶ್ ನಿರಾಣಿ ಮತ್ತೆ ಹೇಳಿರುವುದು ವಿಷಾದದ ಸಂಗತಿ~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.