ಮಂಗಳೂರು: ಕರಾವಳಿಯ ಹಲವೆಡೆ ಸೋಮವಾರ ಮಧ್ಯಾಹ್ನದಿಂದ ಮಳೆಯ ಆರ್ಭಟ ಜೋರಾಗಿದೆ. ಮಂಗಳೂರು ನಗರದಲ್ಲಿ ಕೆಲವು ಗಂಟೆಗಳ ಕಾಲ ಜೋರಾಗಿ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲಾ ಜಲಾವೃತವಾಗಿ, ಹಲವು ಕಡೆಗಳಲ್ಲಿ ಗಂಟೆಗಟ್ಟಲೆ ಸಂಚಾರದಟ್ಟಣೆ ಸೃಷ್ಟಿಯಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಬೆಳ್ತಂಗಡಿ, ಸುಬ್ರಹ್ಮಣ್ಯ, ಮೂಡುಬಿದಿರೆ, ಮುಲ್ಕಿ, ಬಜ್ಪೆ ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಬಿರುಸಾಗಿದೆ. ಪುತ್ತೂರು, ಸುಳ್ಯದಲ್ಲಿ ಸಾಧಾರಣ ಮಳೆಯಾಗಿದೆ.
ಮಳೆಯ ಅಬ್ಬರಕ್ಕೆ ನಗರದ ಹಲವು ವೃತ್ತಗಳಲ್ಲಿ ರಸ್ತೆಗಳು ಜಲಾವೃತಗೊಂಡವು. ಜ್ಯೋತಿ ವೃತ್ತದಲ್ಲಿ ರಸ್ತೆಯ ಮೇಲೆ ಎರಡು ಅಡಿಗಳಿಗೂ ಹೆಚ್ಚಿನ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ರಾಷ್ಟ್ರೀಯ ಹೆದ್ದಾರಿಗಳಲ್ಲೂ ಮಳೆಯ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ನಿಧಾನಗತಿಯಲ್ಲಿ ವಾಹನಗಳು ಸಾಗುತ್ತಿದ್ದರಿಂದ ದೀರ್ಘಕಾಲ ಸಂಚಾರದಟ್ಟಣೆ ಉಂಟಾಗಿತ್ತು.
ತುಂತುರು ಮಳೆ: ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಬಸವನಬಾಗೇವಾಡಿಯಲ್ಲಿ ಸಾಧಾರಣೆ ಹಾಗೂ ಗದಗ, ಬಾಗಲಕೋಟೆ, ಹೊನ್ನಾವರದಲ್ಲಿ ತುಂತುರು ಮಳೆಯಾಗಿದೆ.
ವರುಣನ ಅಬ್ಬರ (ಚಿತ್ರದುರ್ಗ ವರದಿ): ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಮತ್ತು ಭರಮಸಾಗರ ಹೋಬಳಿಯ ಹಲವು ಕಡೆ ಸೋಮವಾರ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಸಂಜೆ 6.15ರ ಸುಮಾರಿಗೆ ಸಿರಿಗೆರೆ ಸುತ್ತಮುತ್ತ ಭಾರಿ ಮಳೆಯಾಗಿದೆ. ಭರಮಸಾಗರ ಹೋಬಳಿಯಾದ್ಯಂತ ಸಂಜೆ 5.45ರ ಸುಮಾರಿಗೆ ಉತ್ತಮ ಮಳೆಯಾಗಿದೆ. ಹೋಬಳಿಯ ಹೆಚ್ಚಿನ ಹಳ್ಳಿಗಳಲ್ಲಿ ಇಂದಿನದು ವರ್ಷದ ಮೊದಲ ಮಳೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.