ಮಂಗಳೂರು: ಮಂಗಳವಾರ ಸುರಿದ ಭಾರಿ ಮಳೆಯಿಂದ ಆಗಿರುವ ಸಮಸ್ಯೆಗಳನ್ನು ನಿವಾರಿಸಲು ಬುಧವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದೆ.
ಚರಂಡಿಯಲ್ಲಿ ತುಂಬಿರುವ ಹೂಳು ತೆರವುಗೊಳಿಸಬೇಕು. ಚರಂಡಿ ಅತಿಕ್ರಮಣವನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ.
ಮಂಗಳವಾರ ಸುರಿದ ಮಳೆಯಿಂದ ನಗರದಲ್ಲಿ ಸುಮಾರು ೫೦ ಹಾಗೂ ಬಂಟ್ವಾಳದಲ್ಲಿ ೧೨ ಮನೆಗಳಿಗೆ ಹಾನಿಯಾಗಿದೆ.
ಸಂಸದ ನಳಿನ್ ಕುಮಾರ ಕಟೀಲ್, ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಬುಧವಾರ ಬೆಳಿಗ್ಗೆ ಹಾನಿಗೀಡಾದ ಪ್ರದೇಶಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಚರಂಡಿಯ ಹೂಳಿನಿಂದಲೇ ಹೆಚ್ಚಿನ ತೊಂದರೆ ಆಗಿದೆ ಎಂದು ಜನರು ದೂರಿದರು.
ಪರಿಹಾರ ವಿತರಣೆ: ಮಂಗಳವಾರ ಮೃತಪಟ್ಟ ಉದಯನಗರದ ಮೋಹಿನಿ ಹಾಗೂ ಕೊಡಿಯಾಲಬೈಲ್ ನ ಮುಕ್ತಾಬಾಯಿ ಅವರ ಕುಟುಂಬಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ತಲಾ ₹೫ಲಕ್ಷ ಪರಿಹಾರಧನದ ಚೆಕ್ ವಿತರಿಸಿದರು.
ಈ ಮಧ್ಯೆ ಬುಧವಾರ ಬೆಳಿಗ್ಗೆ ಕೆಲಕಾಲ ಬಿಸಿಲಿನ ವಾತಾವರಣ ಇತ್ತು. ಆದರೆ, ಮತ್ತೆ ದಟ್ಟ ಮೋಡ ಕವಿದಿದ್ದು, ಮಳೆಯಾಗುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.