ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 2.15ರ ಹೊತ್ತಿಗೆ ಲಘು ಭೂಕಂಪ ಆದ ಅನುಭವ ಆಗಿದೆ. ಈ ಹಿನ್ನೆಲೆಯಲ್ಲಿ ಸುನಾಮಿ ಸಂಭವಿಸುವ ಅಪಾಯದ ಸೂಚನೆ ಇದ್ದು ಕಡಲ ತೀರದಲ್ಲಿರುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
`ನಾನು ಕುಳಿತಿದ್ದ ಕುರ್ಚಿ ಕೆಲವು ಸೆಕೆಂಡ್ಗಳ ಕಾಲ ಏಕಾಏಕಿ ಅಲ್ಲಾಡಿದೆ. ನಮ್ಮ ಕಚೇರಿಯಲ್ಲಿದ್ದ ಕೆಲವರಿಗೂ ಇದೇ ಅನುಭವ ಆಗಿದೆ~ ಎಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೀರಾ ವಿ. ಭಟ್ `ಪ್ರಜಾವಾಣಿ~ಗೆ ತಿಳಿಸಿದರು.
ಕೂಳೂರಿನ ಗುಪ್ತ ಕೋಲ್ ಸಂಸ್ಥೆ ಕಚೇರಿ ಇರುವ ವಾಣಿಜ್ಯ ಸಂಕೀರ್ಣದಲ್ಲೂ ಭೂಕಂಪದ ಅನುಭವ ಆಗಿದೆ.
`ನಾನು ಊಟ ಮುಗಿಸಿ ಬಂದು ಕುರ್ಚಿಯಲ್ಲಿ ಕುಳಿತಿದ್ದೆ. ಏಕಾಏಕಿ ಕುರ್ಚಿ ಅಲ್ಲಾಡಿದ ಅನುಭವ ಆಯಿತು. ಮೊದಲು ಆರೋಗ್ಯ ಸಮಸ್ಯೆಯಿಂದ ಹೀಗಾಗಿರಬಹುದು ಎಂದುಕೊಂಡಿದ್ದೆ. ಬಳಿಕ ಇದೇ ರೀತಿಯ ಅನುಭವ ಅನೇಕರಿಗೆ ಆಗಿದ್ದು ತಿಳಿಯಿತು~ ಎಂದು ಸಂಸ್ಥೆ ಸಿಬ್ಬಂದಿ ರಾಮದಾಸ ಎಕ್ಕೂರು ತಿಳಿಸಿದರು.
ಮುನ್ನೆಚ್ಚರಿಕೆ: `ಮೀನುಗಾರಿಕೆಗೆ ತೆರಳಿದವರು ಸಮುದ್ರದಿಂದ ವಾಪಾಸ್ಸಾಗುವಂತೆ ಸೂಚನೆ ನೀಡಲಾಗಿದೆ. ಕಡಲಿನ ಬೆಳವಣಿಗೆ ಬಗ್ಗೆ ನಿಗಾ ವಹಿಸಲಾಗಿದೆ. ಸುನಾಮಿ ಚೆನ್ನೈ ಸಮುದ್ರ ತೀರಕ್ಕೆ ಅಪ್ಪಳಿಸಿದರೆ ನಮಗೆ ಮಾಹಿತಿ ಬರುತ್ತದೆ. ಆ ಬೆಳವಣಿಗೆಯನ್ನು ನೋಡಿಕೊಂಡು ಇಲ್ಲಿನ ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ~ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.