ADVERTISEMENT

ಮಕ್ಕಳಿಗೆ ಕಥೆ ಹೇಳುವುದು ಕಷ್ಟ: ವಿವೇಕ ಶಾನಭಾಗ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಪ್ರಥಮ್‌ ಬುಕ್ಸ್‌ ಆಯೋಜಿಸಿದ್ದ ‘ಮಕ್ಕಳ ಜನಪ್ರಿಯ ಸಾಹಿತ್ಯ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಂಚನ್‌ ಬ್ಯಾನರ್ಜಿ ಅವರು ಪುಸ್ತಕ ಅನಾವರಣಗೊಳಿಸಿ ಟಾಟಾ ಟ್ರಸ್ಟ್‌ನ ಉಷಾ ಮುಕುಂದ್‌ ಅವರಿಗೆ ಹಸ್ತಾಂತರಿಸಿದರು (ಎಡದಿಂದ) ಸೂಜಿ ಸಿಂಗ್ ಹಾಗೂ ಲೇಖಕ ವಿವೇಕ ಶಾನಭಾಗ ಇದ್ದಾರೆ.
ಪ್ರಥಮ್‌ ಬುಕ್ಸ್‌ ಆಯೋಜಿಸಿದ್ದ ‘ಮಕ್ಕಳ ಜನಪ್ರಿಯ ಸಾಹಿತ್ಯ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಂಚನ್‌ ಬ್ಯಾನರ್ಜಿ ಅವರು ಪುಸ್ತಕ ಅನಾವರಣಗೊಳಿಸಿ ಟಾಟಾ ಟ್ರಸ್ಟ್‌ನ ಉಷಾ ಮುಕುಂದ್‌ ಅವರಿಗೆ ಹಸ್ತಾಂತರಿಸಿದರು (ಎಡದಿಂದ) ಸೂಜಿ ಸಿಂಗ್ ಹಾಗೂ ಲೇಖಕ ವಿವೇಕ ಶಾನಭಾಗ ಇದ್ದಾರೆ.   

ಬೆಂಗಳೂರು: ‘ಮಕ್ಕಳಿಗೆ ಕಥೆ ಹೇಳುವುದು ಕಷ್ಟ. ಅವರು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾರೆ. ಸಾವಿನ ನಂತರ ಏನಾಗುತ್ತದೆ, ಯಾಕೆ ಹೀಗೆ ಆಗುತ್ತಿದೆ ಎಂದು ಪ್ರಶ್ನೆಗಳ ಸುರಿಮಳೆ ಸುರಿಸುತ್ತಾರೆ. ನನ್ನ ಮಕ್ಕಳು ಅವರ ಅಜ್ಜಿಯ ಕಥೆಯನ್ನೇ ಇಷ್ಟಪಡುತ್ತಾರೆ’ ಎಂದು ಲೇಖಕ ವಿವೇಕ ಶಾನಭಾಗ ಹೇಳಿದರು.

ಪಂಜೆ ಮಂಗೇಶರಾಯ, ಕುವೆಂಪು, ಜಿ.ಪಿ ರಾಜರತ್ನಂ, ಸಿದ್ಧಯ್ಯ ಪುರಾಣಿಕ, ಬಿ.ಕೆ ತಿರುಮಲಮ್ಮ ಅವರ ಆಯ್ದ ಕವನಗಳ ಸಂಗ್ರಹ ‘ಮಕ್ಕಳ ಜನಪ್ರಿಯ ಸಾಹಿತ್ಯ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಕ್ಕಳು ಇಷ್ಟಪಟ್ಟು ಕೇಳುವಂತೆ ಕಥೆ ಹೇಳುವುದು ಎಲ್ಲರಿಗೂ ಸಾಧ್ಯವಿಲ್ಲ. ನಾನು ಕೂಡ ನನ್ನ ಮಕ್ಕಳಿಗೆ ಕಥೆ ಹೇಳುತ್ತೇನೆ. ಇಲ್ಲಿ ನಾನು ಐದು ಮಾನದಂಡಗಳನ್ನು ಇಟ್ಟುಕೊಂಡು ಕವಿತೆಗಳನ್ನು ಆಯ್ಕೆ ಮಾಡಿದ್ದೇನೆ. ನನ್ನ ಮುಖ್ಯ ಉದ್ದೇಶ ಇದ್ದದ್ದು ಕವಿತೆಗಳ ಮೂಲಕ ಮಕ್ಕಳು ಕನ್ನಡದಲ್ಲಿ ಓದಿ, ಬರೆಯುವಂತೆ ಆಕರ್ಷಿತರಾಗಬೇಕು, ಹಾಡಿನ ಮೂಲಕ ಹೇಳುವಂತಿರಬೇಕು, ಅನುಭವ ಪ್ರಪಂಚವನ್ನು ವಿಸ್ತರಿಸಬೇಕು, ಪ್ರಪಂಚ ಜ್ಞಾನ ಹೆಚ್ಚಬೇಕು, ಕನ್ನಡದ ಕೆಲವು ಲೇಖಕರ ಪರಿಚಯ ಅವರಿಗೆ ಆಗಬೇಕು’ ಎಂದರು.

ADVERTISEMENT

‘ಪುಸ್ತಕದ ಮೇಲೆ ಅತ್ಯುತ್ತಮ ಚಿತ್ರಗಳನ್ನು ಬಿಡಿಸಲಾಗಿದೆ. ಇವು ಮಕ್ಕಳನ್ನು ಹೆಚ್ಚು ಆಕರ್ಷಿಸಲಿವೆ’ ಎಂದರು.

‘ಒಂದು ಶೀರ್ಷಿಕೆ ಅಡಿಯಲ್ಲಿ ಐದು ಚಿಕ್ಕ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಪ್ರಮುಖ ಐದು ಲೇಖಕರ ಕವಿತೆಗಳು ಇದರಲ್ಲಿ ಇವೆ’ ಎಂದು ಲೇಖಕಿ ಕಾಂಚನ್‌ ಬ್ಯಾನರ್ಜಿ ಹೇಳಿದರು.

‘ನಮ್ಮ ಪ್ರಕಟಣೆಯ ಬಹುತೇಕ ಪುಸ್ತಕಗಳು ವೆಬ್‌ಸೈಟ್‌ನಲ್ಲಿ (www.prathambooks.org) ದೊರೆಯುತ್ತವೆ’ ಎಂದು ಪ್ರಥಮ್‌ ಬುಕ್ಸ್‌ನ ಸೂಜಿ ಸಿಂಗ್ ಹೇಳಿದರು.
*
‘ಮರೆಯದ ಕ್ಷಣ’
‘ನಾನು ಹಾಗೂ ನನ್ನ ತಂದೆ, ಪ್ರೊ ಡಿ.ಕೆ ಭೀಮಸೇನ್‌ರಾವ್‌ ಅವರ ಮನೆಗೆ ಹೋಗಿದ್ದೆವು. ನಮ್ಮ ತಂದೆಗೆ(ಸಿದ್ಧಯ್ಯ ಪುರಾಣಿಕ) ಅವರು ಮಕ್ಕಳ ಕವನಗಳನ್ನು ಬರೆದುಕೊಡಲೇಬೇಕು ಎಂದು ಪಟ್ಟುಹಿಡಿದರು. ಆಗ ಕೆಲವೇ ನಿಮಿಷಗಳಲ್ಲಿ ಅವರು 2 ಕವನ ರಚಿಸಿದರು. ಅವು ‘ಅಜ್ಜನ ಕೋಲಿದು ನನ್ನಯ ಕುದುರೆ’, ‘ಕರಡಿಯ ತಕ ತಕ ಕುಣಿಸುತ ಬಂದ’ ಇವು ಈಗಲೂ ಜನಪ್ರಿಯ ಕವಿತೆಗಳಾಗಿ ಉಳಿದಿವೆ ’ ಎಂದು ಸಿದ್ಧಯ್ಯ ಪುರಾಣಿಕ ಅವರ ಮಗಳು ವಿಜಯಾ ನಂದೀಶ್ವರ್‌ ನೆನಪು ಮಾಡಿಕೊಂಡರು.
**
ಪುಸ್ತಕ, ಲೇಖಕ, ಬೆಲೆ 
ಹಾರು–ಬೀಳು ಕವನಗಳು, ಬಿ.ಕೆ ತಿರುಮಲಮ್ಮ, ₹40
ಪಾಪ ಮತ್ತು ಪೀಪಿ ಕವನಗಳು, ಡಾ.ಜಿ.ಪಿ.ರಾಜರತ್ನಂ, ₹40
ಕುವೆಂಪು ಅವರ ಚಂದ್ರ ಮತ್ತು ಕಾಮನ ಬಿಲ್ಲು ಕವನಗಳು, ಕುವೆಂಪು, ₹40
ತೆಂಕಣ ಗಾಳಿಯಾಟ, ಪಂಜೆ ಮಂಗೇಶರಾಯ, ₹40
ನನ್ನ ಕುದುರೆ, ಡಾ.ಸಿದ್ಧಯ್ಯ ಪುರಾಣಿಕ, ₹40

ಪ್ರಕಾಶನ: ಪ್ರಥಮ್‌ ಬುಕ್ಸ್‌
ಐದು ಪುಸ್ತಕಗಳ ಒಟ್ಟು ಬೆಲೆ: ₹ 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.