ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ಮಠ ಮತ್ತು ದೇವಸ್ಥಾನಗಳಿಗೆ ಮಂಜೂರು ಮಾಡಿದ ಹಣ ಎಷ್ಟು? ಬರೋಬ್ಬರಿ 396.26 ಕೋಟಿ ರೂಪಾಯಿ!
ಆಶ್ಚರ್ಯ ಆದರೂ ಸತ್ಯ. ಕಾಂಗ್ರೆಸ್ನ ಆರ್.ನರೇಂದ್ರ ಮತ್ತು ಪಕ್ಷೇತರ ಸದಸ್ಯ ಗೂಳಿಹಟ್ಟಿ ಶೇಖರ್ ಕೇಳಿರುವ ಪ್ರತ್ಯೇಕ ಪ್ರಶ್ನೆಗಳಿಗೆ ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ಲಿಖಿತ ರೂಪದ ಉತ್ತರದಲ್ಲಿ ಈ ಅಂಶವನ್ನು ತಿಳಿಸಿದ್ದಾರೆ.
2008-09ರಲ್ಲಿ ರೂ 24.27 ಕೋಟಿ; 2009-10ನೇ ಸಾಲಿನಲ್ಲಿ ರೂ 72.60 ಕೋಟಿ; 2010-11ನೇ ಸಾಲಿನಲ್ಲಿ ರೂ 199 ಕೋಟಿ ಹಾಗೂ 2011-12ನೇ ಸಾಲಿನಲ್ಲಿ 100 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಇದರಲ್ಲಿ ಕೇವಲ ಮಠಗಳಿಗೆ ನೀಡಿರುವುದೇ 75.13 ಕೋಟಿ ರೂಪಾಯಿ. ಉಳಿದ ಹಣವನ್ನು ವಿವಿಧ ದೇವಸ್ಥಾನಗಳಿಗೆ ನೀಡಲಾಗಿದೆ ಎಂದು ವಿವರಿಸಲಾಗಿದೆ.
ಅನುದಾನ ಕೊಟ್ಟ ನಂತರ ಸಂಬಂಧಪಟ್ಟ ಸಂಸ್ಥೆಗಳಿಂದ ಬಳಕೆ ಪ್ರಮಾಣ ಪತ್ರವನ್ನೂ ಪಡೆಯಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.