ಕಾರವಾರ: ತಾಲ್ಲೂಕಿನ ಮಾಜಾಳಿಯಲ್ಲಿ ಶನಿವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಹರಕೆಯ ನಿಮಿತ್ತ ಮಕ್ಕಳಿಗೆ ಹೊಟ್ಟೆಯ ಭಾಗಕ್ಕೆ ಸೂಜಿಯಿಂದ ಚುಚ್ಚಿ ಬಟ್ಟೆಯಂತೆ ಹೊಲಿಯುವ ಸಂಪ್ರದಾಯ ಮೌಢ್ಯಕ್ಕೆ ಸಾಕ್ಷಿಯಾಯಿತು.
ಈ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದೆ. ಸೂಜಿಯನ್ನು ಚುಚ್ಚು ವಾಗ ಮಕ್ಕಳಿಗೆ ಸ್ವಲ್ಪ ನೋವಾದರೂ ಸಂಪ್ರದಾಯಕ್ಕೆ ಜೋತುಬೀಳುತ್ತಾರೆ. ಈ ರೀತಿ ಮಾಡುವುದರಿಂದ ಮನದ ಬಯಕೆ ಈಡೇರುತ್ತದೆ ಎಂಬ ನಂಬಿಕೆ ಇದೆ. ಸೂಜಿಯಿಂದ ಚುಚ್ಚಿದರೂ ದೇವರ ಅನುಗ್ರಹದಿಂದಾಗಿ ನೋವಾಗುವುದಿಲ್ಲ ಎನ್ನುವವರು ಇದ್ದಾರೆ.
ಈ ಜಾತ್ರೆಗೆ ಕೊಂಕಣಿಯಲ್ಲಿ ‘ಮಾರ್ಕಪೊನವ್’ ಎಂದು ಕರೆಯುತ್ತಾರೆ. ಶ್ರೀರಾಮನಾಥ ದೇವರ ಜಾತ್ರಾ ಮಹೋತ್ಸವ ಇದಾಗಿದೆ. ರಾಮನಾಥ ದೇವರ ವಿಗ್ರಹದ ಮುಂದೆ ನೂರಾರು ಮಕ್ಕಳು ಹೊಟ್ಟೆಗೆ ಚುಚ್ಚಿಸಿ ಕೊಳ್ಳುತ್ತಾರೆ. ಅಳು, ಆಕ್ರಂದನದ ನಡುವೆಯೇ ಸೂಜಿ ಚುಚ್ಚಿ ದಾರವನ್ನು ಗಂಟು ಹಾಕಲಾಗುತ್ತದೆ. ಕೆಲದಿನಗಳ ನಂತರ ದಾರ ತಾನಾಗಿಯೇ ಬಿದ್ದು ಹೋಗುತ್ತದೆ.
ಸೂಜಿ ಚುಚ್ಚಿದ ನಂತರ ಅವರ ಹೆಸರಿನಲ್ಲಿ ಒಂದು ತೆಂಗಿನಕಾಯಿ ಒಡೆಯಲಾಗುತ್ತದೆ. ಅಲ್ಲಿಗೆ ಭಕ್ತರಿಗೆ ದೇವರ ಅಭಯ ದೊರೆಯಿತು ಎಂಬ ನಂಬಿಕೆ ಸ್ಥಳೀಯರದ್ದು.
ಹೊಟ್ಟೆ ಭಾಗಕ್ಕೆ ಹೊಲಿಗೆ ಹಾಕಿಸಿ ಕೊಳ್ಳುವ ಮೂಲಕ ಗಂಡು ಮಕ್ಕಳು ಹರಕೆ ತೀರಿಸಿದರೆ, ಈ ಗ್ರಾಮದ ಹುಡುಗಿ ಅಥವಾ ಸೊಸೆಯಾಗಿ ಗ್ರಾಮಕ್ಕೆ ಕಾಲಿರಿಸಿದವರು ತಲೆ ಮೇಲೆ ದೀಪವನ್ನು ಇಟ್ಟುಕೊಂಡು ಗುಡ್ಡ ಹತ್ತಿ ದೇವರ ಮೂರ್ತಿಯ ಪಾದದವರೆಗೂ ನಡೆದುಕೊಂಡು ಹೋಗಿ ನಮಿಸಬೇಕು. ಬಾಡ ದೇವಸ್ಥಾನದಿಂದ ದೇವತಿ ದೇವಸ್ಥಾನದವರೆಗೆ ನಡಿಗೆಯಲ್ಲೇ ಬರಬೇಕು. ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪ ತೋರಿಸಿ ಭಕ್ತಿ ಪ್ರದರ್ಶಿಸಬೇಕು. ಇದಾದ ನಂತರವೇ ಆಕೆ ದೇವರ ಪ್ರೀತಿಗೆ ಪಾತ್ರಳಾಗು ತ್ತಾಳೆಂಬುದು ಇಲ್ಲಿನವರ ನಂಬಿಕೆ.
ಇತರೆ ಜಾತ್ರೆಗಳಂತೆ ವಿಶೇಷ ಪೂಜೆ, ರಥೋತ್ಸವ ಕೂಡ ಇಲ್ಲಿ ನಡೆಯುತ್ತದೆ. ಅಬ್ಬಲಿ (ಕನಕಾಂಬರ) ಹೂವಿನಿಂದ ಅಲಂಕೃತಗೊಂಡ ತೇರನ್ನು ಎಳೆಯುವುದು ಈ ಜಾತ್ರೆಯ ವಿಶೇಷ. ಬಂಡಿ ಎಂದು ಕರೆಯುವ ತೇರನ್ನು ಭಕ್ತರು ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ಥಾನದತ್ತ ಎಳೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.