ಹಾವೇರಿ: ನಗರದ ಗುತ್ತಿಗೆದಾರರೊಬ್ಬರು ಸಲ್ಲಿಸಿದ ದೂರಿನನ್ವಯ ಹಾವೇರಿಯ ಮಾಜಿ ಶಾಸಕ ನೆಹರೂ ಓಲೇಕಾರ ಹಾಗೂ ಅವರ ಇಬ್ಬರ ಪುತ್ರರ ವಿರುದ್ಧ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯ ಬಂಧನದ ಆದೇಶ ಜಾರಿಗೊಳಿಸಿದೆ. ಇದಲ್ಲದೇ, ನಗರಸಭೆಯ ಆರು ಜನ ಅಧಿಕಾರಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲು ಆದೇಶಿಸಿದೆ.
ಮಾಜಿ ಶಾಸಕ ನೆಹರೂ ಓಲೇಕಾರ, ಅವರ ಇಬ್ಬರು ಪುತ್ರರು ಸೇರಿದಂತೆ ಏಳು ಜನರ ವಿರುದ್ಧ ಸ್ವಜನ ಪಕ್ಷಪಾತ, ಖೊಟ್ಟಿ ಪ್ರಮಾಣಪತ್ರ ಹಾಗೂ ಲೋಕಾಯುಕ್ತಕ್ಕೆ ಸುಳ್ಳು ಆದಾಯ ತೋರಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗುತ್ತಿಗೆದಾರರಾದ ಶಶಿಧರ ಹಳ್ಳಿಕೇರಿ ಅವರು ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ.ಸಂದೇಶ ಅವರು, ದೂರಿನಲ್ಲಿದ್ದ ಪ್ರಥಮ ಆರೋಪಿಯಾದ ಮಾಜಿ ಶಾಸಕ ನೆಹರೂ ಓಲೇಕಾರ, ಎರಡು ಮತ್ತು ಮೂರನೇ ಆರೋಪಿಗಳಾದ ಓಲೇಕಾರ ಅವರ ಪುತ್ರರಾದ ಮಂಜುನಾಥ ಹಾಗೂ ದೇವರಾಜ ವಿರುದ್ಧ ಬಂಧನಕ್ಕೆ ಆದೇಶಿಸಿದ್ದಾರಲ್ಲದೇ,
ನಾಲ್ಕನೇ ಆರೋಪಿ ನಗರಸಭೆ ಮಾಜಿ ಆಯುಕ್ತ ಎಚ್.ಕೆ.ರುದ್ರಪ್ಪ, ಐದು ಮತ್ತು ಆರನೇ ಆರೋಪಿಗಳಾದ ಎಂಜಿನಿಯರುಗಳಾದ ಮಂಜುನಾಥ ಹಾಗೂ ಬಿ.ಕೆ.ಕಲ್ಲಪ್ಪ, ಏಳನೇ ಆರೋಪಿ ದ್ವಿತೀಯ ದರ್ಜೆ ಸಹಾಯ ಶಿವಕುಮಾರ ಕಮದೋಡ ಸೇರಿದಂತೆ ನಗರಸಭೆ ಇನ್ನಿಬ್ಬರು ಅಧಿಕಾರಿಗಳಾದ ಕೆ.ಕೃಷ್ಣ ನಾಯಕ ಹಾಗೂ ಪಿ.ಎಸ್.ಚಂದ್ರಮೋಹನ ಅವರ ವಿರುದ್ಧ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಿದ್ಧಪಡಿಸುವಂತೆ ಆದೇಶಿಸಿದ್ದಾರೆ.
ಓಲೇಕಾರ ಅವರು ಶಾಸಕರಾಗಿದ್ದ ವೇಳೆ ತಮ್ಮ ಪ್ರದೇಶಾಭಿವೃದ್ಧಿ ಅನುದಾನದ ಕಾಮಗಾರಿಗಳ ಗುತ್ತಿಗೆಯನ್ನು ಮಕ್ಕಳಿಗೆ ನೀಡುವ ಮೂಲಕ ಸ್ವಜನಪಕ್ಷಪಾತ ಮಾಡಿದ್ದಾರೆ. ಮಗ ಮಂಜುನಾಥ ಅವರನ್ನು ಮೊದಲ ದರ್ಜೆ ಗುತ್ತಿಗೆದಾರರನ್ನು ಮಾಡಲು ನಗರಸಭೆಯಿಂದ ರೂ.೨.೧೫ ಕೋಟಿ, ಹಾಗೂ ರೂ.೧.೫೦ ಕೋಟಿ ಕಾಮಗಾರಿ ಮಾಡಿದ ಬಗ್ಗೆ ಖೊಟ್ಟಿ ಪ್ರಮಾಣಪತ್ರ ಪಡೆದಿದ್ದಾರೆ. ಹಾಗೂ ಲೋಕಾಯುಕ್ತರಿಗೆ ನೀಡಿದ ಆದಾಯ ಪ್ರಮಾಣಪತ್ರದಲ್ಲಿ ಕೃಷಿ ಆದಾಯ ಮಾತ್ರ ನೀಡಿದ್ದು, ಗುತ್ತಿಗೆದಾರರಾದ ಮಕ್ಕಳ ಆದಾಯವನ್ನು ಮರೆಮಾಚಲಾಗಿದೆ ಎಂದು ದೂರಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.