ಶಿರಸಿ (ಉ.ಕ.ಜಿಲ್ಲೆ): ಲಕ್ಷಾಂತರ ಭಕ್ತ ಸಮೂಹದ ಜೈಕಾರ, ಭಕ್ತಿಯ ಪರಾಕಾಷ್ಠೆಯ ನಡುವೆ ತ್ರಿಶಕ್ತಿ ಸ್ವರೂಪಿಣಿ, ಮಲೆನಾಡಿನ ನಾಡದೇವಿ ಮಾರಿಕಾಂಬೆಯ ರಥೋತ್ಸವ ಬುಧವಾರ ಇಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಕು ಹರಿಯುವ ಮುನ್ನವೇ ಭಕ್ತರು ದೇವಾಲಯ ಎದುರು ಕಾತುರದಿಂದ ಕಾಯುತ್ತಿದ್ದಾಗ, ಮಾರಿಕಾಂಬೆ ಸರ್ವಾಲಂಕಾರ ಭೂಷಿತೆಯಾಗಿ ರಥಾರೂಢಳಾದಳು. ರಥದ ಎದುರು ನೂರಾರು ಮಹಿಳೆಯರು, ಪುರುಷರು ‘ಅಮ್ಮ’ನನ್ನು ಮೈಮೇಲೆ ಆವಾಹನೆ ಮಾಡಿಕೊಂಡು ಹರಕೆ ತೀರಿಸಿದರು. ರಥ ಮುಂದಕ್ಕೆ ಸಾಗುತ್ತಿರುವಾಗ ಭಕ್ತರು ಬಾಳೆಹಣ್ಣು, ದುಡ್ಡು, ಕೋಳಿ ಎಸೆದು ಕೃತಾರ್ಥರಾದರು.
ಕುಂದಾಪುರ, ಸೊರಬ ಇನ್ನಿತರ ಕಡೆಗಳಿಂದ ಬಂದಿದ್ದ ದುರಗಮುರಗಿ ತಂಡದವರು ಚಾವಟಿಯಿಂದ ಮೈಮೇಲೆ ಹೊಡೆದುಕೊಂಡು ಸೇವೆ ಸಲ್ಲಿಸಿದರು. ಲಂಬಾಣಿ ಮಹಿಳೆಯರು ಮೆರವಣಿಗೆಯ ಉದ್ದಕ್ಕೂ ಸೋಬಾನೆ ಪದ ಹಾಡಿದರು.
ಮಾದಿಗ ಯುವಕನಿಂದ ಮೋಸ ಹೋದ ಬ್ರಾಹ್ಮಣ ಕನ್ಯೆ ಸತ್ಯ ಅರಿತಾಗ ಆತನ ವಧೆ ಮಾಡಿ, ಸತಿ ಸಹಗಮನ ಮಾಡಿಕೊಂಡ ಕಥಾ ಭೂಮಿಕೆಯಲ್ಲಿ ನಡೆಯುವ ಜಾನಪದೀಯ ಆಚರಣೆಯಲ್ಲಿ ದೇವಿಯು, ದೇವಾಲಯದಿಂದ ಹೊರಡುವ ಪೂರ್ವದಲ್ಲಿ ಭೂತರಾಜನ ಎದುರು ಕುಂಬಳಕಾಯಿಯ ಸಾತ್ವಿಕ ಬಲಿ ನೀಡಲಾಯಿತು.
ಕಹಳೆ, ಡೊಳ್ಳುವಾದ್ಯಗಳೊಂದಿಗೆ ಶೋಭಾಯಾತ್ರೆಯಲ್ಲಿ ಬಂದ ದೇವಿಯನ್ನು ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗಿದೆ.
ಗುರುವಾರ ಬೆಳಿಗ್ಗೆ 6 ಗಂಟೆಯಿಂದ ದೇವಿಗೆ ಹಣ್ಣು–ಕಾಯಿ, ತುಲಾಭಾರ, ಉಡಿ, ಬೇವಿನ ಉಡುಗೆ ಸೇವೆಗಳು ಪ್ರಾರಂಭವಾಗಲಿವೆ. ಎಂಟು ದಿನಗಳ ಕಾಲ ಗದ್ದುಗೆಯಲ್ಲಿ ವಿರಾಜಮಾನಳಾಗುವ ದೇವಿ ಇದೇ 19ರಂದು ಅಟ್ಟಲಿನಲ್ಲಿ ಮರಳುವ ಮೂಲಕ ಜಾತ್ರೆ ಅಂತ್ಯಗೊಳ್ಳಲಿದೆ.
ಹಾವೇರಿ, ಹಾನಗಲ್, ಹುಬ್ಬಳ್ಳಿ, ಸಾಗರ, ಕುಂದಾಪುರ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ, ಗೋವಾದಿಂದ ಬಂದಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.