ADVERTISEMENT

ಮಾರಿಕಾಂಬೆ ರಥೋತ್ಸವಕ್ಕೆ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಶಿರಸಿ (ಉ.ಕ.ಜಿಲ್ಲೆ): ಲಕ್ಷಾಂತರ ಭಕ್ತ ಸಮೂಹದ ಜೈಕಾರ, ಭಕ್ತಿಯ ಪರಾ­ಕಾಷ್ಠೆಯ ನಡುವೆ ತ್ರಿಶಕ್ತಿ ಸ್ವರೂಪಿಣಿ, ಮಲೆನಾಡಿನ ನಾಡದೇವಿ ಮಾರಿ­ಕಾಂಬೆಯ ರಥೋತ್ಸವ ಬುಧವಾರ ಇಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಕು ಹರಿಯುವ ಮುನ್ನವೇ ಭಕ್ತರು ದೇವಾಲಯ ಎದುರು ಕಾತುರ­ದಿಂದ ಕಾಯುತ್ತಿದ್ದಾಗ, ಮಾರಿಕಾಂಬೆ ಸರ್ವಾ­ಲಂಕಾರ ಭೂಷಿತೆಯಾಗಿ ರಥಾ­ರೂಢ­ಳಾದಳು. ರಥದ ಎದುರು ನೂರಾರು ಮಹಿಳೆಯರು, ಪುರುಷರು ‘ಅಮ್ಮ’ನನ್ನು ಮೈಮೇಲೆ ಆವಾಹನೆ ಮಾಡಿಕೊಂಡು ಹರಕೆ ತೀರಿಸಿದರು. ರಥ ಮುಂದಕ್ಕೆ ಸಾಗುತ್ತಿರುವಾಗ ಭಕ್ತರು ಬಾಳೆಹಣ್ಣು, ದುಡ್ಡು,  ಕೋಳಿ ಎಸೆದು ಕೃತಾರ್ಥರಾದರು.

ಕುಂದಾಪುರ, ಸೊರಬ ಇನ್ನಿತರ ಕಡೆ­ಗಳಿಂದ ಬಂದಿದ್ದ ದುರಗಮುರಗಿ ತಂಡ­ದವರು ಚಾವಟಿಯಿಂದ ಮೈಮೇಲೆ ಹೊಡೆದುಕೊಂಡು ಸೇವೆ ಸಲ್ಲಿಸಿದರು. ಲಂಬಾಣಿ ಮಹಿಳೆಯರು ಮೆರವಣಿಗೆಯ ಉದ್ದಕ್ಕೂ ಸೋಬಾನೆ ಪದ ಹಾಡಿದರು.

ಮಾದಿಗ ಯುವಕನಿಂದ ಮೋಸ ಹೋದ ಬ್ರಾಹ್ಮಣ ಕನ್ಯೆ ಸತ್ಯ ಅರಿತಾಗ ಆತನ ವಧೆ ಮಾಡಿ, ಸತಿ ಸಹಗಮನ ಮಾಡಿ­ಕೊಂಡ ಕಥಾ ಭೂಮಿಕೆಯಲ್ಲಿ ನಡೆ­ಯುವ ಜಾನಪದೀಯ ಆಚರಣೆ­ಯಲ್ಲಿ ದೇವಿಯು, ದೇವಾಲಯದಿಂದ ಹೊರಡುವ ಪೂರ್ವ­ದಲ್ಲಿ ಭೂತ­ರಾಜನ ಎದುರು ಕುಂಬಳ­ಕಾಯಿ­ಯ ಸಾತ್ವಿಕ ಬಲಿ ನೀಡಲಾಯಿತು.

ಕಹಳೆ, ಡೊಳ್ಳುವಾದ್ಯಗಳೊಂದಿಗೆ ಶೋಭಾಯಾತ್ರೆಯಲ್ಲಿ ಬಂದ ದೇವಿ­ಯನ್ನು ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ಗುರುವಾರ ಬೆಳಿಗ್ಗೆ 6 ಗಂಟೆ­ಯಿಂದ ದೇವಿಗೆ ಹಣ್ಣು–ಕಾಯಿ, ತುಲಾಭಾರ, ಉಡಿ, ಬೇವಿನ ಉಡುಗೆ ಸೇವೆಗಳು ಪ್ರಾರಂಭವಾಗಲಿವೆ. ಎಂಟು ದಿನಗಳ ಕಾಲ ಗದ್ದುಗೆಯಲ್ಲಿ ವಿರಾಜಮಾನಳಾಗುವ ದೇವಿ ಇದೇ 19ರಂದು ಅಟ್ಟಲಿನಲ್ಲಿ ಮರಳುವ ಮೂಲಕ ಜಾತ್ರೆ ಅಂತ್ಯಗೊಳ್ಳಲಿದೆ.

ಹಾವೇರಿ, ಹಾನಗಲ್‌, ಹುಬ್ಬಳ್ಳಿ, ಸಾಗರ, ಕುಂದಾಪುರ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ, ಗೋವಾದಿಂದ ಬಂದಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.