ಬೆಂಗಳೂರು: ಮೆಟ್ರೊ ನೌಕರರ ಸಂಘದ ಜೊತೆಗಿನ ಮಾತುಕತೆ ವರದಿಯನ್ನು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್ಗೆ ಸಲ್ಲಿಸಿದೆ.
ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದ್ದು ಅಲ್ಲಿಯವರೆಗೂ ಮುಷ್ಕರ ನಡೆಸುವ ವಿಚಾರದಲ್ಲಿ ಮೆಟ್ರೊ ನೌಕರರ ಸಂಘ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕಾಗಿದೆ.
ಈ ಕುರಿತ ಪ್ರಕರಣವನ್ನು ನ್ಯಾಯಮೂರ್ತಿ ಎ. ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ನೌಕರರ ಸಂಘ ಮತ್ತು ಬಿ.ಎಂ.ಆರ್.ಸಿ.ಎಲ್. ಜೊತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಧ್ಯಸ್ಥಿಕೆಯಲ್ಲಿ ಜೂನ್ ೧೫ರಂದು ನಡೆದ ಸಭೆಯ ನಡಾವಳಿಯ ವರದಿಯನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ನ್ಯಾಯಪೀಠಕ್ಕೆ ಸಲ್ಲಿಸಿದರು.
'ವರದಿಯಲ್ಲಿನ ಕೆಲವು ಅಂಶಗಳಿಗೆ ನಮ್ಮ ಒಪ್ಪಿಗೆ ಇಲ್ಲ. ಇದಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸುತ್ತೇವೆ' ಎಂದು ಮೆಟ್ರೊ ನೌಕರರ ಸಂಘದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
'ಈ ನಡಾವಳಿ ವರದಿಯಲ್ಲಿ ನಮ್ಮ ಸಹಿ ಇಲ್ಲ'' ಎಂದು ತಿಳಿಸಿದರು. ವರದಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.