ADVERTISEMENT

ಮೊದಲು ನೌಕರಿ; ಆ ಬಳಿಕ ಹಣ!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:48 IST
Last Updated 7 ಮಾರ್ಚ್ 2018, 19:48 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಕಲಬುರ್ಗಿ: ಕರ್ನಾಟಕ ಲೋಕ ಸೇವಾ  ಆಯೋಗ (ಕೆಪಿಎಸ್‌ಸಿ)ವು ಫೆ. 25ರಂದು ನಡೆಸಿದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ನೆರವಾಗಿ ನೌಕರಿ ಕೊಡಿಸಿದರೆ ಹಣ ಕೊಡುವುದಾಗಿ ಕೆಲವು ಅಭ್ಯರ್ಥಿಗಳು ಒಪ್ಪಿಕೊಂಡಿದ್ದರು ಎಂಬ ವಿಷಯ ವಿಚಾರಣೆ ವೇಳೆ ತಿಳಿದು ಬಂದಿದೆ.

‘ಎಫ್‌ಡಿಎ ಹುದ್ದೆ ನೇಮಕಾತಿಗೆ ಅಭ್ಯರ್ಥಿಯೊಬ್ಬರು ₹13 ಲಕ್ಷ ಕೊಡಲು ಒಪ್ಪಿಕೊಂಡು, ಆ ಪೈಕಿ ₹2 ಲಕ್ಷ ಮುಂಗಡ ಕೊಟ್ಟಿದ್ದರು. ಪರೀಕ್ಷೆ ದಿನ ಮೈಕ್ರೊ ಇಯರ್ ಫೋನ್ ಮೂಲಕ ಉತ್ತರ ನೀಡುತ್ತೇವೆ ಎಂದು ನಂಬಿಸಿದ್ದಜಾಲ ಕೈಕೊಟ್ಟಿತ್ತು. ಇದರಿಂದ ನೊಂದ ಅಭ್ಯರ್ಥಿ ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪ್ರಮುಖ ಆರೋಪಿಪರಾರಿಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

ಆರೋಪಿ ಪತ್ತೆಗೆ ಜಾಲ: ಪ್ರಮುಖಆರೋಪಿ ಮೈಮೂದ್ ಇಮಾಮಸಾಬ್ ನದಾಫ್ ಬಂಧನಕ್ಕೆ ಜಾಲ ಬೀಸಲಾಗಿದ್ದು, ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆತನ ಸಹೋದರ ಕೂಡ ಈ ಜಾಲದಲ್ಲಿದ್ದ ಎಂಬುದು ತಿಳಿದು ಬಂದಿದೆ’ ಎಂದು ಅವರು ಹೇಳುತ್ತಾರೆ.

ADVERTISEMENT

ಪ್ರಾಂಶುಪಾಲರ ವಿರುದ್ಧ ದೂರು: ‘ಫೆ. 25ರಂದು ನಡೆದ ಎಫ್‌ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಬಂಡಲ್ ಅನ್ನು ಪರೀಕ್ಷೆಗೂ ಮುನ್ನ ಒಡೆಯಲಾಗಿದೆ. ಈ ಕೃತ್ಯದಲ್ಲಿ ಪರೀಕ್ಷಾ ಕೇಂದ್ರವಿದ್ದ ಇಲ್ಲಿಯ ನ್ಯಾಷನಲ್‌ ಕಾಲೇಜಿನ ಪ್ರಾಂಶುಪಾಲರ ಕೈವಾಡವಿರುವ ಶಂಕೆ ಇದೆ ಎಂದು ಆರೋಪಿಸಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಇಲ್ಲಿನ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.