ಮೈಸೂರು: ಮೈಸೂರು ಮೃಗಾಲಯದಲ್ಲಿ ಮೊಸಳೆಯೊಂದು ದಾಳಿ ನಡೆಸಿದ್ದು, ಪ್ರಾಣಿ ಪಾಲಕನ ಬಲಗಾಲಿನ ಮೂರು ಬೆರಳುಗಳನ್ನು ತುಂಡರಿಸಿದೆ.
ಶ್ರೀರಾಂಪುರ ನಿವಾಸಿ ಪುಟ್ಟಸ್ವಾಮಿ ಅವರು ಮೊಸಳೆ ದಾಳಿಯಲ್ಲಿ ಗಾಯಗೊಂಡವರು. ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೊಸಳೆ ಆವರಣ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಪುಟ್ಟಸ್ವಾಮಿ ಆಯತಪ್ಪಿ ಮೊಸಳೆ ಹೊಂಡಕ್ಕೆ ಕಾಲಿಟ್ಟಿದ್ದಾರೆ. ಆಗ ಕಣ್ಣು ಕಾಣದ ಮೊಸಳೆಯೊಂದು ಗಾಬರಿಯಿಂದ ದಾಳಿ ನಡೆಸಿದೆ. ಸ್ಥಳದಲ್ಲಿದ್ದ ಮೂವರು ನೌಕರರು ದೊಣ್ಣೆಯ ಸಹಾಯದಿಂದ ಮೊಸಳೆ ಓಡಿಸಿ ರಕ್ಷಿಸಿದ್ದಾರೆ.
‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, 15 ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕೈಗೂ ಮೊಸಳೆ ಕಚ್ಚಿದೆ. ಘಟನೆ ನಡೆದ ಸಂದರ್ಭದಲ್ಲಿ ಮೂವರು ಪ್ರಾಣಿ ಪಾಲಕರು ಹಾಗೂ ಒಬ್ಬ ಸೂಪರ್ವೈಸರ್ ಸ್ಥಳದಲ್ಲಿದ್ದರು. ಪುಟ್ಟಸ್ವಾಮಿ ಮೂರು ವರ್ಷಗಳಿಂದ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.