ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಹಿಸಿದ್ದಾರೆ. ಅವರು ನನಗಿಂತಲೂ ದೊಡ್ಡ ನಟ’ ಎಂದು ನಟ ಪ್ರಕಾಶ್ ರೈ ಅವರು ವ್ಯಂಗ್ಯವಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ.
ಡಿವೈಎಫ್ಐ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘11 ನೇ ರಾಜ್ಯ ಸಮ್ಮೇಳನ'ದಲ್ಲಿ ಅವರು ಮಾತನಾಡಿದ್ದರು.
ಪ್ರಜಾವಾಣಿ ಅಂತರ್ಜಾಲ ಪುಟದಲ್ಲಿ ಪ್ರಕಟವಾದ ರೈ ಹೇಳಿಕೆಗೆ ಒಂದೂವರೆ ಸಾವಿರ ಜನ ಪ್ರತಿಕ್ರಿಯೆ ನೀಡಿದ್ದಾರೆ.
‘ಮೋದಿ ಅವರ ಮೌನದ ಕುರಿತು ಪ್ರಕಾಶ್ ರೈ ಸರಿಯಾಗಿಯೇ ಹೇಳಿದ್ದಾರೆ’ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ಹಿಂದಿರುಗಿಸಲು ಹಿಂಜರಿಯಲ್ಲ: ‘ಗೌರಿ ಹತ್ಯೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮನೋಭಾವ ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ. ಇದನ್ನು ಖಂಡಿಸಿ, ನನಗೆ ಬಂದಿರುವ ‘ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ’ಯನ್ನು ಹಿಂದಿರುಗಿಸಲು ಹಿಂದೆ–ಮುಂದೆ ನೋಡುವುದಿಲ್ಲ’ ಎಂದು ಪ್ರಕಾಶ್ ರೈ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.