ADVERTISEMENT

ಮೋದಿ ಮನವೊಲಿಕೆ ಇಲ್ಲ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2012, 19:30 IST
Last Updated 4 ನವೆಂಬರ್ 2012, 19:30 IST

ಹುಬ್ಬಳ್ಳಿ: `ಯಾರು ಏನೇ ಹೇಳಿದರೂ ನಾನಂತೂ ಬಿಜೆಪಿಯಲ್ಲಿ ಇರಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಇಲ್ಲಿ ಕಡ್ಡಿ ಮುರಿದಂತೆ ಹೇಳಿದರು.

ಹೂಗಾರ ಸಮಾವೇಶದಲ್ಲಿ ಭಾಗವಹಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿ, `ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನನ್ನನ್ನು ಮನವೊಲಿಸುತ್ತಿದ್ದಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಆದರೆ ಜಗದೀಶ ಶೆಟ್ಟರ್ ಹಾಗೂ ಸಚಿವರು, ಶಾಸಕರು ನಾನು ಬಿಜೆಪಿ ಬಿಡದಂತೆ ಒತ್ತಾಯಿಸುತ್ತಿದ್ದಾರೆ. ಅದು ನನ್ನ ಮೇಲಿನ ಪ್ರೀತಿಯಿಂದ ಅಷ್ಟೇ~ ಎಂದರು.

`ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಕುರಿತು ನಾನಿನ್ನೂ ನಿರ್ಧರಿಸಿಲ್ಲ. ನ. 6ರಂದು ರಾಜೀನಾಮೆ ನೀಡುತ್ತೇನೆ ಎನ್ನುವುದೂ ಕೇವಲ ಊಹಾಪೋಹ~ ಎಂದು ಸ್ಪಷ್ಟಪಡಿಸಿದರು.
ಪ್ರತ್ಯೇಕವಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿದಿದೆ. ಶೀಘ್ರದಲ್ಲೇ ಹೈಕಮಾಂಡ್ ಅವರೊಂದಿಗೆ ಮಾತುಕತೆ ನಡೆಸಲಿದೆ~ ಎಂದರು.

`ಯಡಿಯೂರಪ್ಪ ಪಕ್ಷ ತೊರೆಯುವುದಿಲ್ಲ. ಇದರ ಬಗ್ಗೆ ಅನುಮಾನ ಬೇಡ. ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ನಾನೂ ಸೇರಿದಂತೆ ಹಲವು ಮುಖಂಡರು ಈಗಾಗಲೇ ವರಿಷ್ಠರೊಂದಿಗೆ ಚರ್ಚಿಸಿದ್ದೇವೆ. ರಾಜ್ಯ ರಾಜಕೀಯಕ್ಕೆ ಎಸ್. ಎಂ.ಕೃಷ್ಣ ಅವರ ಪುನರಾಗಮನದಿಂದ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಈ ಹಿಂದೆ ಕೃಷ್ಣ ಅವರ ನಾಯಕತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ~ ಎಂದರು.

ಕೆಜಿಪಿಗೆ ಹೊನ್ನಳ್ಳಿ

ಅಂಜುಮನ್ ಸಂಸ್ಥೆಯ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಜಬ್ಬಾರ್‌ಖಾನ್ ಹೊನ್ನಳ್ಳಿ ಅವರು ಯಡಿಯೂರಪ್ಪ ಸ್ಥಾಪಿಸಲಿರುವ ಕರ್ನಾಟಕ ಜನತಾ ಪಕ್ಷ  (ಕೆಜೆಪಿ) ಸೇರುವುದು ಬಹುತೇಕ ಖಚಿತಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೊನ್ನಳ್ಳಿ, `ಕಾಂಗ್ರೆಸ್‌ನಿಂದಂತೂ ದೂರವಾಗಿದ್ದೇನೆ. ಮತ್ತೆ ಅತ್ತ ಮುಖ ಮಾಡುವುದು ಕನಸಿನ ಮಾತು. ಕೆಜೆಪಿ ಸೇರುವ ಬಗ್ಗೆ ಬೆಂಬಲಿಗರ ಜೊತೆ ಚರ್ಚಿಸಿ ಸದ್ಯದ್ಲ್ಲಲೇ ನಿರ್ಧಾರಕ್ಕೆ ಬರುತ್ತೇನೆ. ಸಮಾಜಕ್ಕೆ ಸಹಾಯ ಮಾಡುವುದಾದರೆ ನಿಮ್ಮ ಪಕ್ಷಕ್ಕೆ ಬರುತ್ತೇನೆ ಎಂದು ಯಡಿಯೂರಪ್ಪ ಅವರಿಗೆ ತಿಳಿಸಿದ್ದೇನೆ~ ಎಂದು ಪ್ರತಿಕ್ರಿಯಿಸಿದರು.

`ನಾನಿನ್ನೂ ಕೆಜೆಪಿ ಸೇರುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮತ್ತೆ ಮುಖ್ಯಮಂತ್ರಿಯಾದರೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ 1,000 ಕೋಟಿ ರೂಪಾಯಿ ಅನುದಾನ ನೀಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಸಮಾಜಕ್ಕೆ ಅವರು ಕೊಡುಗೆ ನೀಡುವುದಾದರೆ ಅದೇ ದೊಡ್ಡ ಪುಣ್ಯ. ಅವರ ಮಾತಿನಲ್ಲಿ ವಿಶ್ವಾಸವಿದೆ. ಅವರೆಂದೂ ಮಾತು ತಪ್ಪುವವರಲ್ಲ~ ಎಂದರು.

ಮುಸ್ಲಿಂ ಸಮುದಾಯದ ಮುಖಂಡ ಆರೀಫ್ ಮುಜಾವರ್ ಮನೆಯಲ್ಲಿ ಉಪಾಹಾರ ಸೇವಿಸಿದ ಯಡಿಯೂರಪ್ಪ, ಅಲ್ಲಿದ್ದ ಮುಸ್ಲಿಂ ನಾಯಕರೊಂದಿಗೆ ಮಾತನಾಡಿ, ತಮ್ಮ ಅವಧಿಯಲ್ಲಿ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.