ಬೆಂಗಳೂರು: ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡಿರುವ ಮೋಹನ್ ಕುಮಾರ್ ಕೊಂಡಜ್ಜಿ ಮತ್ತು ಪಿ.ಆರ್.ರಮೇಶ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ಕೊಂಡಜ್ಜಿ ಸತ್ಯ ಮತ್ತು ನಿಷ್ಠೆ ಹೆಸರಿನಲ್ಲಿ, ರಮೇಶ್ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿಧಾನಪರಿಷತ್ತಿನಲ್ಲಿ ಖಾಲಿ ಉಳಿದಿದ್ದ ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಇಬ್ಬರಿಬ್ಬರನ್ನು ನಾಮ ನಿರ್ದೇಶನ ಮಾಡಿತ್ತು. ಸಿ.ಎಂ.ಲಿಂಗಪ್ಪ ಹೆಸರಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಲಿಲ್ಲ. ಇನ್ನೊಂದು ಸ್ಥಾನ ಖಾಲಿ ಇದೆ.
ಪ್ರಮಾಣ ಸ್ವೀಕರಿಸಿದ ಮೋಹನ್ ಮತ್ತು ರಮೇಶ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾನಾಯಕ ಡಾ.ಜಿ.ಪರಮೇಶ್ವರ್ ಮತ್ತು ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅಭಿನಂದಿಸಿದರು.
ಮಾಧ್ಯಮ ಗ್ಯಾಲರಿಯಲ್ಲಿ ಸಿಂಧ್ಯಾ: ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಕಲಾಪ ಆರಂಭಕ್ಕೆ ಮೊದಲೇ ಮಾಧ್ಯಮ ಗ್ಯಾಲರಿಯಲ್ಲಿ ಕುಳಿತ್ತಿದ್ದರು. ಮೋಹನ್ ಕೊಂಡಜ್ಜಿ ಪ್ರಮಾಣ ಸ್ವೀಕರಿಸುವುದನ್ನು ನೋಡಲೆಂದು ಆಗಮಿಸಿದ್ದಾಗಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.