ಬೆಂಗಳೂರು: ರಾಮಕಥಾ ಗಾಯಕಿ ಮೇಲಿನ ಅತ್ಯಾ ಚಾರ ಪ್ರಕರಣದಲ್ಲಿ ಎಫ್ಐಆರ್ ರದ್ದುಕೋರಿರುವ ರಾಘವೇಶ್ವರ ಭಾರತೀ ಶ್ರೀಗಳ ಮೇಲ್ಮನವಿ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.
ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಹಾಗೂ ನ್ಯಾಯಮೂರ್ತಿ ಎನ್.ಆನಂದ ಅವರ ವಿಭಾಗೀಯ ಪೀಠವು ಶುಕ್ರವಾರ ಈ ಕುರಿತ ವಾದ ಪ್ರತಿವಾದಗಳ ಆಲಿಕೆಯನ್ನು ಪೂರೈಸಿತು.
ಅರ್ಜಿದಾರ ರಾಮಚಂದ್ರಾಪುರ ಮಠದ ರಾಘವೇ ಶ್ವರ ಭಾರತೀ ಶ್ರೀಗಳ ಪರ ಹಿರಿಯ ವಕೀಲರಾದ ಬಿ.ವಿ. ಆಚಾರ್ಯ ಅವರು ತಮ್ಮ ವಾದ ಮುಂದುವರಿಸಿದರು.
ಒಡ್ಡಿನ ಬಾಗಿಲು ಒಡೆದಂತೆ: ‘ಸಂವಿಧಾನ ದತ್ತ ಮೂಲಭೂತ ಹಕ್ಕಿನ ರಕ್ಷಣೆಗಾಗಿ ನನ್ನ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ’ ಎಂಬ ಆಚಾರ್ಯ ಅವರ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ಪೀಠವು, ‘ಕ್ರಿಮಿನಲ್ ಪ್ರಕರಣ ತನಿಖೆಯ ಹಂತದಲ್ಲಿರುವಾಗ ವೈಯಕ್ತಿಕ ಹಕ್ಕಿನ ರಕ್ಷಣೆಯ ನೆಲೆಯಲ್ಲಿ ಈ ರೀತಿಯ ಅರ್ಜಿಗಳನ್ನು ಪುರಸ್ಕರಿಸುತ್ತಾ ಹೋದರೆ ಒಡ್ಡಿನ ಬಾಗಿಲನ್ನು ಒಡೆದಂತಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಎ.ಎಸ್. ಪೊನ್ನಣ್ಣ ಅವರು, ‘ಸ್ವಾಮೀಜಿಗಳು ರಾಮಕಥಾ ಗಾಯಕಿ ಮೇಲೆ ಹಟ ಸಂಭೋಗ ನಡೆಸಿದ್ದಾರೆ. ಮತ್ತೆ ಮತ್ತೆ ಅತ್ಯಾಚಾರಕ್ಕೆ ಈಡಾಗುತ್ತಿದ್ದ ಕಾರಣ ಸಂತ್ರಸ್ತೆಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದರಿಂದಾಗಿಯೇ ದೂರು ನೀಡಲು ವಿಳಂಬವಾಗಿದೆ’ ಎಂದು ಪುನರುಚ್ಚಸಿದರು.
‘ರಾಮಕಥಾ ಗಾಯಕಿ ಮಠಕ್ಕೆ ಹೋಗುವುದನ್ನು ನಿಲ್ಲಿಸಿದ ಮೇಲೆ ಮತ್ತೆ ಯಾಕೆ ಮಠಕ್ಕೆ ಹೋದರು’ ಎಂದು ನ್ಯಾಯಪೀಠವು ಪ್ರಾಸಿಕ್ಯೂಷನ್ಗೆ ಪ್ರಶ್ನೆ ಮಾಡಿತು.
ಇದಕ್ಕೆ ಉತ್ತರಿಸಿದ ಪೊನ್ನಣ್ಣ, ‘ಮಠದ ಮೇಲಿನ ಶ್ರದ್ಧೆ ಮತ್ತು ಭಕ್ತಿಯಿಂದಾಗಿ ಸಂತ್ರಸ್ತೆ ಹೋದರು’ ಎಂಬ ವಿವರಣೆ ನೀಡಿದರು.
‘ಪ್ರಕರಣ ಕುರಿತಂತೆ ಸಿಐಡಿ ತನಿಖೆ ಸದ್ಯದಲ್ಲೇ ಮುಕ್ತಾಯವಾಗಲಿದೆ. ಪ್ರಾಸಿಕ್ಯೂಷನ್ ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದೆ. ಸತ್ಯ ಹೊರಬರಲು ಪೂರ್ಣ ತನಿಖೆಯ ಅವಶ್ಯಕತೆ ಇದೆ’ ಎಂದು ಹೇಳಿದರು.
ಪ್ರತಿವಾದಿಗಳ ಪರ ವಾದ ಮಂಡಿಸಿದ ಟಿ.ಎಸ್. ಅಮರ ಕುಮಾರ್ ಅವರು, ‘ಅರ್ಜಿದಾರರ ಈ ಮೇಲ್ಮನವಿಯಲ್ಲಿ ಸಂತ್ರಸ್ತೆಯ ಪುತ್ರಿಯು ತನ್ನ ಸ್ನೇಹಿತರ ಜೊತೆಗಿದ್ದ ಕೆಲವು ಛಾಯಾಚಿತ್ರಗಳನ್ನು ನ್ಯಾಯಾ ಲಯಕ್ಕೆ ನೀಡುವ ಮೂಲಕ ಆಕೆಯ ತೇಜೋವಧೆ ಮಾಡಲು ಯತ್ನಿಸಿದೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.