ಬೆಂಗಳೂರು: ‘ಜನಾರ್ದನ ರೆಡ್ಡಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂಬ ರಾಜ್ಯಪಾಲರ ಸಲಹೆಯನ್ನು ನಾನು ಒಪ್ಪಿಕೊಂಡಿದ್ದರೆ ಆಗಲೇ ಸರ್ಕಾರ ಪತನವಾಗುತ್ತಿತ್ತು. ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ನಾನು ಅವರ ಮಾತು ಕೇಳಲಿಲ್ಲ’ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
‘ಜನಾರ್ದನ ರೆಡ್ಡಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದೆ. ಅವರು
ನನ್ನ ಮಾತನ್ನು ಕೇಳಿದ್ದರೆ ತೊಂದರೆಗೆ ಸಿಲುಕುತ್ತಿರಲಿಲ್ಲ’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಇತ್ತೀಚೆಗೆ ಪ್ರೆಸ್ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿದ್ದರು.
ಗುರುವಾರ ನಡೆದ ಪಕ್ಷದ ಕಾರ್ಯಕಾರಿಣಿಗೂ ಮುನ್ನ ಈ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಅವರ ಮಾತು ಕೇಳಿದ್ದರೆ ತಕ್ಷಣವೇ ನನ್ನ ಸರ್ಕಾರ ಉರುಳಿಬೀಳುತ್ತಿತ್ತು’ ಎಂದರು.
ವೈಫಲ್ಯಗಳ ಸರಮಾಲೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಸುರಿದ ಮಳೆಯಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಸರ್ಕಾರ ಮೊದಲು ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಮಾಡಲಿ. ನಂತರ ಮೈಸೂರಿಗೆ ಬುಲೆಟ್ ರೈಲು ಓಡಿಸುವ ಯೋಜನೆಯತ್ತ ನೋಡಲಿ’ ಎಂದು ಟೀಕಿಸಿದರು.
ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿ ಗೊಳಿಸಿದ್ದ ಹಲವು ಜನಪ್ರಿಯ ಯೋಜನೆಗಳಿಗೆ ದುರು ದ್ದೇಶದಿಂದ ಕತ್ತರಿ ಹಾಕಲಾಗಿದೆ. ಅನ್ನಭಾಗ್ಯ ಯೋಜ ನೆಯ ಹೆಸರಿನಲ್ಲಿ ಬಡವರಿಗೆ ಕಳಪೆ ಅಕ್ಕಿ ವಿತರಿಸ ಲಾಗುತ್ತಿದೆ. ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಹಾಲಿನ ಗುಣಮಟ್ಟವೂ ಸರಿ ಇಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸದೇ ಕಾಲಹರಣ ಮಾಡುತ್ತಿದೆ ಎಂದು ದೂರಿದರು.
ನೂರು ದಿನಗಳು ಕಳೆದರೂ ಸರ್ಕಾರದಲ್ಲಿ ಸರಿಯಾಗಿ ಕೆಲಸ ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಇಬ್ಬರೂ ಗೊಂದಲದಲ್ಲಿ ಮುಳುಗಿದ್ದಾರೆ. ಮುಖ್ಯಮಂತ್ರಿಯವರಿಗೆ ತಮ್ಮ ಸಂಪುಟದ ಸದಸ್ಯರ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಯಾವುದೇ ಸಚಿವರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರು ಟೀಕಿಸಿದರು.
‘ಹೇಳೋದು ಸುಲಭ...’
ರಾಜಭವನದಲ್ಲಿ ಕುಳಿತು ಮಾತನಾಡುವುದು ಸುಲಭ. ಆದರೆ, ಸರ್ಕಾರದಲ್ಲಿ
ಇದ್ದುಕೊಂಡು ಆಡಳಿತ ನಡೆಸುವುದು ಕಷ್ಟ.
–ಬಿ.ಎಸ್. ಯಡಿಯೂರಪ್ಪ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.