ಬೆಂಗಳೂರು (ಪಿಟಿಐ): ಕರ್ನಾಟಕ ಲೋಕಾಯುಕ್ತ ಸ್ಥಾನಕ್ಕೆ ತಮ್ಮ ಹೆಸರು ಸೂಚಿಸಿ ಮಾಡಿದ ಶಿಫಾರಸನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಕೇರಳ ಹೈಕೋರ್ಟ್ ಮಾಜಿ ಮುಖ್ಯನ್ಯಾಯಮುರ್ತಿ ನ್ಯಾ. ಎಸ್.ಆರ್.ಬನ್ನೂರಮಠ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ವಿರುದ್ಧ ಸತ್ಯದೂರ ಹಾಗೂ ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ಹರಿಹಾಯ್ದಿದ್ದಾರೆ.
ಕರ್ನಾಟಕ ಲೋಕಾಯುಕ್ತ ಸ್ಥಾನಕ್ಕೆ ನ್ಯಾ. ಎಸ್.ಆರ್.ಬನ್ನೂರಮಠ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮಾಡಿದ ಶಿಫಾರಸನ್ನು ರಾಜ್ಯಪಾಲ ಎಚ್.ಆರ್.ಭಾರಧ್ವಾಜ್ ಅಧಿಕೃತವಾಗಿ ಸೋಮವಾರ ತಿರಸ್ಕರಿಸಿದ್ದರು. ಆದರೆ ರಾಜ ಭವನ ತನ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳು, ಆಧಾರ ರಹಿತ, ಅಸಮರ್ಥನೀಯ ಹಾಗೂ ಮನಸ್ಸಿಗೆ ತುಂಬಾ ನೋವು ತರುವಂಥದ್ದಾಗಿದೆ~ ಎಂದು ಬನ್ನೂರಮಠ ಆರೋಪಿಸಿದರು.
~ಈ ಆರೋಪಗಳಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಹಾಗೂ ಇದು ನನ್ನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ನನ್ನ ಮೇಲೆ ಮಾಡಿರುವ ಆಧಾರ ರಹಿತ ಆರೋಪದಿಂದ ನನ್ನ ವರ್ಚಸ್ಸಿಗೂ ಧಕ್ಕೆಯಾಗಿದೆ. ಸಾರ್ವಜನಿಕ ವಲಯದಲ್ಲಿ ನನ್ನ ಗೌರವಕ್ಕೆ ಕುಂದು ಉಂಟಾಗಿದೆ~ ಎಂದು ಬನ್ನೂರಮಠ ಅವರು ಮನನೊಂದು ನುಡಿದರು.
ಸುಪ್ರೀಕೋರ್ಟ್ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಸೆಪ್ಟೆಂಬರ್ 19ರಂದು ನೀಡಿದ ರಾಜೀನಾಮೆಯಿಂದ ತೆರವಾದ ಲೋಕಾಯುಕ್ತ ಸ್ಥಾನ ಇಂದಿಗೂ ಭರ್ತಿಯಾಗದೆ ಹಾಗೇ ಉಳಿದಿದೆ. ಮೂರು ತಿಂಗಳ ಹಿಂದೆ ಸರ್ಕಾರ ನ್ಯಾ. ಎಸ್.ಆರ್.ಬನ್ನೂರಮಠ ಅವರ ಹೆಸರನ್ನು ಲೋಕಾಯುಕ್ತ ಸ್ಥಾನಕ್ಕೆ ಪರಿಗಣಿಸುವಂತೆ ರಾಜ್ಯಪಾಲರಿಗೆ ಶಿಪಾರಸು ಮಾಡಿತ್ತು. ಆದರೆ ಇದನ್ನು ರಾಜ ಭವನ ಸಾರಾಸಗಟಾಗಿ ತಳ್ಳಿಹಾಕಿತ್ತು. ಅಲ್ಲಿಂದ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಗುದ್ದಾಟ ನಡೆಯುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.