ಚನ್ನರಾಯಪಟ್ಟಣ: ಬಾಹುಬಲಿ ವಿದ್ಯಾಪೀಠ, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2013ನೇ ಸಾಲಿನ ‘ಪ್ರಾಕೃತ ಜ್ಞಾನಭಾರತಿ ಅಂತರರಾಷ್ಟ್ರೀಯ ಪ್ರಶಸ್ತಿ’ಯನ್ನು ಡಾ.ರಾಮ್ಪ್ರಕಾಶ್ ಪೊದ್ದಾರ್ ಅವರಿಗೆ ಪ್ರದಾನ ಮಾಡಲಾಯಿತು.
ಚಾವುಂಡರಾಯ ಮಂಟಪದಲ್ಲಿ ಏರ್ಪಡಿಸಿದ್ದ ‘ಪ್ರಶಸ್ತಿ ಪ್ರದಾನ ಸಮಾ ರಂಭ’ದಲ್ಲಿ ಕರ್ನಾಟಕ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ಕೆ. ಜೈನ್ ಪ್ರಶಸ್ತಿ ವಿತರಿಸಿದರು. ಈ ಪುರಸ್ಕಾರವು ₨ 2 ಲಕ್ಷ ನಗದು, ಪದಕ ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಪ್ರಾಕೃತ ಮತ್ತು ಜೈನ ಶಾಸ್ತ್ರದ ಅಧ್ಯಯನದ ಪುನರುತ್ಥಾನ ಮತ್ತು ಪ್ರಚಾರಕ್ಕಾಗಿ ಶ್ರಮಿಸಿದ ಗಣ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿ ಸ್ವೀಕರಿಸಿದ ಡಾ.ರಾಮ್ಪ್ರಕಾಶ್ ಪೊದ್ದಾರ್ ಮಾತನಾಡಿ, ‘ಆಂಗ್ಲ ಭಾಷೆಯ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದ ನಾನು ಬಿಹಾರದ ವೈಶಾಲಿಯ ಲ್ಲಿರುವ ಪ್ರಾಕೃತ– ಜೈನಶಾಸ್ತ್ರ ಮತ್ತು ಅಹಿಂಸಾ ಶೋಧ ಸಂಸ್ಥಾನದಲ್ಲಿ ಪ್ರಾಧ್ಯಾಪ ಕನಾಗಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಪುಣೆಯ ಪ್ರಾಚ್ಯವಿದ್ಯಾ ಸಂಸ್ಥೆಯಲ್ಲಿ ಪ್ರಾಕೃತ– ಆಂಗ್ಲ ಶಬ್ದಕೋಶದ ಪ್ರಧಾನ ಸಂಪಾದಕನಾಗಿ ಕಾರ್ಯನಿರ್ವಹಿಸುವ ಮೂಲಕ ಜೈನ, ಪ್ರಾಕೃತ ಸಾಹಿತ್ಯ ಕ್ಷೇತ್ರದಲ್ಲಿ ಶ್ರಮಿಸುತ್ತಿದ್ದೇನೆ’ ಎಂದು ತಿಳಿಸಿದರು.
ಪ್ರಶಸ್ತಿಗೆ ಆಯ್ಕೆಯಾಗಿದ್ದ ಮತ್ತೊಬ್ಬ ಸಾಧಕ ಜೈಪುರದ ಡಾ.ಕಮಲ್ಚಂದ್ ಸೋಗಾನಿ ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಅವರ ಪ್ರಶಸ್ತಿಯನ್ನು ಜೈಪುರದಿಂದ ಬಂದಿದ್ದ ವಕೀಲ ಗೌರವ್ ಜೈನ್ ಅವರಿಗೆ ಹಸ್ತಾಂತರಿ ಸಲಾಯಿತು. ನಿವೃತ್ತ ನ್ಯಾಯಮೂರ್ತಿ ಎ.ಸಿ. ಕಬ್ಬಿನ, ಕ್ಷೇತ್ರದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ, ಡಾ.ಹಂಪಾ ನಾಗರಾಜಯ್ಯ, ಡಾ.ರಾಜಾರಾಮ್ ಜೈನ್, ಎಸ್. ಜೀತೇಂದ್ರಕುಮಾರ್, ಎಂ.ಜೆ. ಇಂದ್ರಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.