ಬೇಲೂರು (ಹಾಸನ): ಹೃದಯಾಘಾತದಿಂದ ಶನಿವಾರ ನಿಧನರಾದ ಶಾಸಕ ವೈ.ಎನ್.ರುದ್ರೇಶ್ ಗೌಡ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಸಚಿವರಾದ ಡಿ.ಕೆ.ಶಿವಕುಮಾರ್, ಎ.ಮಂಜು ಅವರೊಂದಿಗೆ ಮೈಸೂರಿನಿಂದ ಎರಡು ಹೆಲಿಕಾಪ್ಟರ್ನಲ್ಲಿ ಮಧ್ಯಾಹ್ನ ಬೇಲೂರಿಗೆ ಬಂದ ರಾಹುಲ್ ಬಳಿಕ ರುದ್ರೇಶ್ ಗೌಡ ಅವರ ಚೀಕನಹಳ್ಳಿಯ ನಿವಾಸಕ್ಕೆ ತೆರಳಿದರು.
ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು. ಬಳಿಕ ರುದ್ರೇಶ್ ಗೌಡ ಅವರ ಪತ್ನಿ ಕೀರ್ತನಾ ಅವರಿಗೆ ಸಾಂತ್ವನ ಹೇಳಿದ ಅವರು 15 ನಿಮಿಷ ಅವರ ಮನೆಯಲ್ಲಿದ್ದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರಿಗೆ ರುದ್ರೇಶ್ ಗೌಡ ಅವರ ಸಹೋದರರನ್ನು ಪರಿಚಯ ಮಾಡಿಕೊಟ್ಟರು.
ಜನರತ್ತ ನುಗ್ಗಿದ ರಾಹುಲ್: ಹೊರಡುವ ವೇಳೆ ರಾಹುಲ್ ಗಾಂಧಿ ಭದ್ರತಾ ಪಡೆಯನ್ನು ಲೆಕ್ಕಿಸದೆ ಜನರತ್ತ ನುಗ್ಗಿ ಹಸ್ತಲಾಘವ ನೀಡಿದರು. ರಾಹುಲ್ ಗಾಂಧಿಯ ಈ ನಡೆ ಭದ್ರತಾ ಪಡೆಗೂ ಆತಂಕ ಉಂಟುಮಾಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.