ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲದಲ್ಲಿ (ಕೆಎಂಎಫ್) ಹಣಕಾಸು ಅವ್ಯವಹಾರ ಮಾಡಿರುವ ಆರೋಪದ ಮೇಲೆ ದಾಖಲಾದ ದೂರಿನ ರದ್ದತಿಗೆ ಕೋರಿ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೆ ಆದೇಶಿಸಿದೆ.
1994ರಿಂದ 2001ರ ಅವಧಿಯಲ್ಲಿ ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದ ವೇಳೆ ಸುಮಾರು 55 ಕೋಟಿ ರೂಪಾಯಿ ಹಣಕಾಸು ಅವ್ಯವಹಾರ ನಡೆದಿದೆ. ಇದರ ಜೊತೆಗೆ ಸುಮಾರು 38ಕೋಟಿ ರೂಪಾಯಿಗಳ ಇತರ ಅವ್ಯವಹಾರ ನಡೆಸಿದ್ದಾರೆ. ಮಹಾಮಂಡಲದ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಕೆಎಂಎಫ್ ನೇಮಕಾತಿಯಲ್ಲೂ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ.
ಆದರೆ ಇವನ್ನೆಲ್ಲ ರೇವಣ್ಣ ಅಲ್ಲಗಳೆದಿದ್ದಾರೆ. ಯಡಿಯೂರಪ್ಪನವರ ಜೊತೆಗೆ ಇತರ ಪ್ರತಿವಾದಿಗಳಾದ ಸರ್ಕಾರ, ಸಹಕಾರ ಸಂಘಗಳ ರಿಜಿಸ್ಟ್ರಾರ್ ಹಾಗೂ ಇತರರಿಗೂ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು, ಇದರ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದರು.
ಹೊಸ ಟೆಂಡರ್ಗೆ ಹೈಕೋರ್ಟ್ ಆದೇಶ: ಸರ್ವ ಶಿಕ್ಷಣ ಅಭಿಯಾನದ ಅಡಿ ಒಂದರಿಂದ 10ನೇ ತರಗತಿವರೆಗೆ ಕಲಿಕಾ ಹಾಗೂ ಆಟದ ಸಾಮಗ್ರಿ ಪೂರೈಕೆಗೆ ಸಂಬಂಧಿಸಿದಂತೆ 2010ರ ಆ.23ರಂದು ಕರೆದಿರುವ ಟೆಂಡರ್ ಅನ್ನು ರದ್ದುಗೊಳಿಸಿರುವ ಹೈಕೋರ್ಟ್, ಹೊಸದಾಗಿ ಟೆಂಡರ್ ಅಧಿಸೂಚನೆ ಹೊರಡಿಸಿರುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.