ADVERTISEMENT

ರೈತರ ಸಾಲ ಮನ್ನಾಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:35 IST
Last Updated 22 ಜೂನ್ 2013, 19:35 IST

ಬೆಂಗಳೂರು: `ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರ ಹಿತ ಕಾಪಾಡುವ ಉದ್ದೇಶದಿಂದ ರೈತರ ಬೆಳೆ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು' ಎಂದು ರಾಜ್ಯ ರೈತ ಸಂಘದ (ಚುನಾವಣಾ ರಹಿತ) ಅಧ್ಯಕ್ಷ ಜಿ.ಎ.ಲಕ್ಷ್ಮೀನಾರಾಯಣಗೌಡ ಗಬ್ಬಾಡಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪಂಪ್‌ಸೆಟ್‌ಗಳಿಗೆ ಹಗಲು ಕನಿಷ್ಠ 10, ರಾತ್ರಿ 12 ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು. ವಿದ್ಯುತ್ ಕೊರತೆಯನ್ನು ತಪ್ಪಿಸಲು ಸೌರಶಕ್ತಿ ಬಳಕೆಗೆ ಪ್ರೋತ್ಸಾಹ ನೀಡಬೇಕು' ಎಂದರು.

`ಅಕ್ರಮ ಸಕ್ರಮ ಯೋಜನೆ ಅಡಿ ಪಂಪ್‌ಸೆಟ್‌ಗಳಿಗೆ ವಿದ್ಯತ್ ಸಂಪರ್ಕ ಕಲ್ಪಿಸಲು ರೈತರಿಂದ ಹಣ ಪಡೆದು ಇದುವರೆಗೂ ವಿದ್ಯುತ್ ನೀಡಲು ಕ್ರಮ ಕೈಗೊಂಡಿಲ್ಲ. ಕೂಡಲೆ ಈ ಯೋಜನೆಯನ್ನು ಜಾರಿಗೆ ತರಬೇಕು. ನಗರದ ನೀರಿನ ಸಮಸ್ಯೆಯನ್ನು ಪರಿಹರಿಸಲು ಕಾವೇರಿ ಮತ್ತು ಕೃಷ್ಣಕೊಳ್ಳದ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಡಾ. ಪರಮಶಿವಯ್ಯನವರ ವರದಿಯನ್ನು ಜಾರಿಗೆ ತರಬೇಕು' ಎಂದು ಒತ್ತಾಯಿಸಿದರು.

ರೈತರಿಂದ ಬೆಳೆ ವಿಮೆಗೆ ಹಣ ಕಟ್ಟಿಸಿಕೊಂಡು ಇದುವರೆಗೂ ಬೆಳೆ ವಿಮೆಯನ್ನು ಪಾವತಿಸಿಲ್ಲ. ತೀವ್ರ ಬರಗಾಲದಿಂದ ತತ್ತರಿಸಿರುವ ರೈತರಿಗೆ ನೆರವು ನೀಡಲು ಶೀಘ್ರ ಬೆಳೆ ವಿಮೆ ಪಾವತಿಸಬೇಕು. ಶೇ 80ರಷ್ಟು ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಬೇಕು. 60 ವರ್ಷಕ್ಕೂ ಹೆಚ್ಚಿನ ವಯೋಮಾನದ ರೈತರಿಗೆ ಪ್ರತಿ ತಿಂಗಳು ರೂ 5 ಸಾವಿರ ಪಿಂಚಣಿ ನೀಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.