ವಿಜಾಪುರ: `ರಾಜ್ಯದ ರೈತರ ಸಾಲ ಮನ್ನಾ ಮಾಡುವ ವಿಷಯ ಪರಿಶೀಲನೆಯಲ್ಲಿದೆ. ಬರದಿಂದ ತತ್ತರಿಸಿರುವ ಜಾನುವಾರುಗಳಿಗೆ ಶೇ 50ರ ರಿಯಾಯಿತಿ ದರದಲ್ಲಿ ಮೇವು ವಿತರಿಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ಬರ ಪೀಡಿತ ಜಿಲ್ಲೆಯ ಕೆಲ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ, ರೈತರಿಂದ ಅಹವಾಲು ಆಲಿಸಿದ ನಂತರ ಅವರು ಈ ಮಾಹಿತಿ ನೀಡಿದರು.
`ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲು ಅಗತ್ಯವಿರುವೆಡೆ ಮೇವು ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಸಾಗಣೆ ಮತ್ತು ಖರೀದಿ ವೆಚ್ಚ ಸೇರಿದಂತೆ ಶೇ 50 ರಿಯಾಯಿತಿ ದರದಲ್ಲಿ ರೈತರಿಗೆ ಮೇವು ವಿತರಿಸಲಾಗುವುದು. ಅಗತ್ಯಬಿದ್ದರೆ ಹೋಬಳಿ ಮಟ್ಟದಲ್ಲಿಯೂ ಮೇವು ಬ್ಯಾಂಕ್ ಆರಂಭಿಸಲಾಗುವುದು. ಇದಕ್ಕೆ ಮಂಗಳವಾರವೇ ಸರ್ಕಾರಿ ಆದೇಶ ಹೊರಡಿಸಲಾಗಿದೆ~ ಎಂದರು.
`ರೈತರು ಪಡೆದ ಸಾಲವನ್ನು ಯಾವುದೇ ಕಾರಣಕ್ಕೂ ಬಲವಂತದಿಂದ ವಸೂಲಿ ಮಾಡಬಾರದು ಎಂಬ ಸೂಚನೆಯನ್ನು ಎಲ್ಲ ಬ್ಯಾಂಕ್ಗಳಿಗೆ ನೀಡಲಾಗಿದೆ. ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲವನ್ನು ದೀರ್ಘಾವಧಿಯನ್ನಾಗಿ ಪರಿವರ್ತಿಸಿ, ಮರು ಹೊಂದಾಣಿಕೆ ಮಾಡಲಾಗಿದೆ. ಹೀಗಾಗಿ ಸದ್ಯ ರೈತರಿಗೆ ಸಾಲ ಮರುಪಾವತಿಯ ಚಿಂತೆ ಇಲ್ಲ~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.