ADVERTISEMENT

ರೈತ ಭದ್ರತಾ ಕಾಯ್ದೆ: ಪುಟ್ಟಣ್ಣಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2014, 19:30 IST
Last Updated 25 ಫೆಬ್ರುವರಿ 2014, 19:30 IST
ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್‌ ಕುರಿತ ಚರ್ಚೆಯಲ್ಲಿ ಶಾಸಕ ಪುಟ್ಟಣ್ಣಯ್ಯ ಮಾತನಾಡಿದರು. ಶಾಸಕ ಅಶೋಕ್‌ ಖೇಣಿ ಉಪಸ್ಥಿತರಿದ್ದರು 	–ಪ್ರಜಾವಾಣಿ ಚಿತ್ರ
ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್‌ ಕುರಿತ ಚರ್ಚೆಯಲ್ಲಿ ಶಾಸಕ ಪುಟ್ಟಣ್ಣಯ್ಯ ಮಾತನಾಡಿದರು. ಶಾಸಕ ಅಶೋಕ್‌ ಖೇಣಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಹಾರ ಭದ್ರತಾ ಕಾಯ್ದೆಯ ಮಾದರಿಯಲ್ಲಿ ರೈತರಿಗೂ ಭದ್ರತೆ ಒದಗಿಸಲು ‘ರೈತ ಭದ್ರತಾ ಕಾಯ್ದೆ’ ಜಾರಿಗೆ ತರಬೇಕು ಎಂದು ಸರ್ವೋ­ದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಸರ್ಕಾರ­ವನ್ನು ಆಗ್ರಹಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ದೇಶ­ದಲ್ಲಿ ಎಲ್ಲರಿಗೂ ಭದ್ರತೆ ಇದೆ. ರೈತ­­­ನಿಗೆ ಮಾತ್ರ ಇಲ್ಲ. ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರನ್ನು ರಕ್ಷಿಸಲು ರೈತ ಭದ್ರತಾ ಕಾಯ್ದೆ ಜಾರಿಗೆ ತನ್ನಿ. ಮಾರು­ಕಟ್ಟೆಯಲ್ಲಿ ಬೆಲೆ ಕುಸಿದರೂ ಸರ್ಕಾ­ರವೇ ರೈತರ ಬೆನ್ನಿಗೆ ನಿಲ್ಲು­ವಂತಹ ವ್ಯವಸ್ಥೆ ಮಾಡಿ’ ಎಂದರು.

‘ರಾಜ್ಯದಲ್ಲಿ ಕೃಷಿ ಬೆಲೆ ಆಯೋಗ ಅಸ್ತಿತ್ವಕ್ಕೆ ತರುವುದಾಗಿ ಸರ್ಕಾರ ಹೇಳು­ತ್ತಿದೆ. ಆಯೋಗ ರಚನೆ ಆದ ತಕ್ಷಣವೇ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆ­ಯಲು ಸಾಧ್ಯವೇ? ಬೆಲೆ ಕುಸಿತದಿಂದ ರೈತ­ರನ್ನು ಪಾರು ಮಾಡಲು ಹಣ ಎಲ್ಲಿದೆ? ರೈತರ ರಕ್ಷಣೆಗಾಗಿ ಹೊಸ ತೆರಿಗೆ ವಿಧಿಸಿ. ಕನಿಷ್ಠ ₨ 12 ಸಾವಿರ ಕೋಟಿ ನಿಧಿ ಸ್ಥಾಪಿಸಿ’ ಎಂದು ಸಲಹೆ ಮಾಡಿದರು.

ಪಾಳೇಕರ್‌ ನಾಮಕರಣ ಮಾಡಿ: ‘ಸಹಜ ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಿರುವ ಸುಭಾಷ್‌ ಪಾಳೇಕರ್‌ ಅವರನ್ನು ಬಳಸಿಕೊಂಡು ರಾಜ್ಯದ ರೈತರನ್ನು ರಕ್ಷಿಸಿ. ಯಾರ್‌್ಯಾರನ್ನೋ ವಿಧಾನ ಪರಿಷತ್ತಿಗೆ ನಾಮಕರಣ ಮಾಡುತ್ತೀರಿ. ಪಾಳೇಕರ್‌ ಅವರನ್ನು ನಾಮಕರಣ ಮಾಡಿ, ಕೃಷಿ ಸುಧಾರಣೆಗೆ ಅವರ ಸಲಹೆ ಪಡೆಯಿರಿ’ ಎಂದು ಪುಟ್ಟಣ್ಣಯ್ಯ ಒತ್ತಾಯಿಸಿದರು.

ವಿಚ್ಛೇದನ ನಿಯಂತ್ರಣ ಕಾನೂನು: ರಾಜ್ಯ­­ದಲ್ಲಿ ವಿವಾಹ ವಿಚ್ಛೇದನ ಪಡೆ­ಯು­­ವವರ ಸಂಖ್ಯೆ ಹೆಚ್ಚುತ್ತಿದೆ. ಬೆಂಗ­ಳೂರು ನಗರದಲ್ಲಿ ಇದು ತೀವ್ರ­ಗತಿ­ಯಲ್ಲಿ ಏರುತ್ತಿದೆ. ಇದಕ್ಕೆ ಕಡಿ­ವಾಣ ಹಾಕದೇ ಇದ್ದರೆ, ಸಮಾಜದ ಸ್ವಾಸ್ಥ್ಯ ಕಾ­ಯಲು ಸಾಧ್ಯವಿಲ್ಲ. ಈ ಕಾರ­ಣ­­ಕ್ಕಾಗಿ ಮದುವೆ ಮತ್ತು ವಿಚ್ಛೇದ­ನ­ದ ಬಗ್ಗೆ ಸದ­­ನದಲ್ಲಿ ಗಂಭೀರ ಚರ್ಚೆ ಆಗ­ಬೇಕು. ವಿಚ್ಛೇ­­ದನ ಪ್ರಕರಣ­ಗಳನ್ನು ಕಡಿಮೆ ಮಾ­­ಡುವ ದಿಸೆಯಲ್ಲಿ ಕಾನೂನು ರೂ­ಪಿ­­­ಸಬೇಕು ಎಂದು ಒತ್ತಾಯಿಸಿದರು.

ಮಾತಿನ ಮೋಡಿಗೆ ತಲೆದೂಗಿದರು
ಪುಟ್ಟಣ್ಣಯ್ಯ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ತಮ್ಮ ಎಂದಿನ ಶೈಲಿಯಲ್ಲಿ ಹಲವು ಹಾಸ್ಯ ಚಟಾಕಿಗಳನ್ನು ಹಾರಿಸಿ­ದರು. ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಆರೋಗ್ಯ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಗಂಭೀರ­ವಾಗಿ ವಿಚಾರ ಮಂಡಿಸಿ­ದರು. ಅವರ ಮಾತಿನ ಶೈಲಿಗೆ ತಲೆದೂ­ಗಿದ ಬಹುತೇಕ ಸದಸ್ಯರು ಅವರಿಗೆ ಹೆಚ್ಚು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.