ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮಕ್ಕೂ ಮುಂದಾಗದಂತೆ ಮಧ್ಯಂತರ ತಡೆ ನೀಡಬೇಕು ಎಂಬ ಕೋರಿಕೆಯನ್ನು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಸರ್ಕಾರ ಸಚಿವ ಸಂಪುಟ ಸಭೆ ನಡೆಸಲು ಹಾಗೂ ಈ ಕುರಿತಂತೆ ಯಾವುದೇ ಕ್ರಮಕ್ಕೆ ಮುಂದಾಗಲು ಕೋರ್ಟ್ ಯಾಕೆ ಮಧ್ಯ ಪ್ರವೇಶಿಸಬೇಕು. ಅದನ್ನು ಶಾಸಕಾಂಗ ನಿರ್ಧರಿಸುತ್ತದೆ ಅಲ್ಲವೇ? ಎಂದ ಪೀಠ, ಒಂದು ವೇಳೆ ಕಾನೂನಿನ ತೊಡಕು ಇದ್ದರೆ ಅದನ್ನು ಕೋರ್ಟ್ ನಿರ್ಧರಿಸುತ್ತದೆ. ಆದಾಗ್ಯೂ ಸರ್ಕಾರದ ಯಾವುದೇ ನಿರ್ಧಾರ ಈಗಾಗಲೇ ಈ ಕೋರ್ಟ್ ನೀಡಿರುವ ಮಧ್ಯಂತರ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರನ್ನು ಒಳಗೊಂಡ ಪೀಠವು ಉಚ್ಚರಿಸಿತು.
ಈ ಕುರಿತಂತೆ ದಾಖಲಾಗಿರುವ ಎಲ್ಲ ಸಾರ್ಜನಿಕ ಹಿತಾಸಕ್ತಿ ಅರ್ಜಿಗಳ ಮೇಲೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಪೀಠವು ನಿರ್ದೇಶನ ನೀಡಿತು.
ಧರ್ಮದ ಮಾನ್ಯತೆ ನೀಡಿದರೆ ಸಾಮಾಜಿಕ ಸಂಘರ್ಷ ಉಂಟಾಗುತ್ತದೆ ಎಂಬ ವಾದವನ್ನು ಖಡಾಖಂಡಿತ ದನಿಯಲ್ಲಿ ತಳ್ಳಿ ಹಾಕಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, 'ಇವೆಲ್ಲಾ ನೀವು ಅಂದುಕೊಂಡಿರುವ ಅತಿಯಾದ ಕಲ್ಪನೆಗಳು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.