ಕಲಬುರ್ಗಿ: ಲೋಕಾಯುಕ್ತರಿಗೆ ಚಾಕು ಇರಿತಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟಲ್ ಡಿಟೆಕ್ಟರ್ ದೋಷದಿಂದ ಚಾಕು ಪತ್ತೆಯಾಗಲಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸೂಚಿಸಿದ್ದಾರೆ. ಭದ್ರತೆ ಲೋಪಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಲೋಕಾಯುಕ್ತ ಸಂಸ್ಥೆಗೆ ಪಾರ್ಲಿಮೆಂಟ್ ಮಾದರಿಯಲ್ಲಿ ಭದ್ರತೆ ಒದಗಿಸುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದರು.
ಬಿಜೆಪಿ ಆಡಳಿತದಲ್ಲಿ ಏನೇನಾಗಿದೆ ಎನ್ನುವ ವಿಷಯ ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಾಯುಕ್ತರಿಗೆ ಚಾಕು ಇರಿದಿರುವ ಆರೋಪಿ ತೇಜರಾಜ್ ಶರ್ಮಾ ಈ ಮೊದಲೂ ಲೋಕಾಯುಕ್ತರೊಂದಿಗೆ ಜಗಳ ಮಾಡಿದ್ದ. ಲೋಕಾಯುಕ್ತರ ಒಳ್ಳೆಯತನವನ್ನೇ ದುರುಪಯೋಗ ಮಾಡಿಕೊಂಡಿದ್ದಾನೆ. ಲೋಕಾಯುಕ್ತರು ಮೊದಲೇ ಹೆಚ್ಚಿನ ಭದ್ರತೆ ಕೇಳಿದ್ದರೆ ಕಲ್ಪಿಸಬಹುದಿತ್ತು ಎಂದು ತಿಳಿಸಿದರು.
ನಿರ್ಗಮನ ಪಥಸಂಚನ
ಇಲ್ಲಿನ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ 3ನೇ ತಂಡದ ಸ್ಪೆಷಲ್ ಆರ್ಎಸ್ಐ, ಆರ್ಎಸ್ಐ ಮತ್ತು 9ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಭಾಗಿಯಾದರು.
ಅರ್ಹತೆ ಇದ್ದರೆ ಪುತ್ರಿಗೆ ಟಿಕೆಟ್ ನೀಡಲಿ: ನನ್ನ ಪುತ್ರಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವುದು ನಿಜ. ಅರ್ಹತೆ ಇದ್ದರೆ ಪಕ್ಷ ಟಿಕೆಟ್ ನೀಡಲಿ. ಆದರೆ ನನ್ನ ಮಗಳು ಎನ್ನುವ ಕಾರಣಕ್ಕೆ ಟಿಕೆಟ್ ಕೊಡಬೇಕಾಗಿಲ್ಲ. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ನಲ್ಲಿ ಅವಳು ಈಗಾಗಲೇ ಕೆಲಸ ಮಾಡುತ್ತಿದ್ದಾಳೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.